ಗುಬ್ಬಿ:
ಇಬ್ಬರು ಅಂಗವಿಕಲ ಮಕ್ಕಳೊಂದಿಗೆ ತಾಯಿಯೊಬ್ಬಳು ನೇಣಿಗೆ ಶರಣಾಗಿರೋ ಧಾರುಣ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದಲ್ಲಿ ನಡೆದಿದೆ. ತಾಯಿ ವಿಜಯಲಕ್ಷ್ಮೀ, ವಿಕಲಚೇತನ ಮಕ್ಕಳಾದ ಚೂಡಾಮಣಿ, ನರಸಿಂಹಮೂರ್ತಿ ಆತ್ಮಹತ್ಯೆ ಮಾಡಿಕೊಂಡಿರೋ ದುರ್ದೈವಿಗಳಾಗಿದ್ದಾರೆ.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದ ಮಹದೇವಯ್ಯ, ವಿಜಯಲಕ್ಷ್ಮೀ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಿಬ್ಬರೂ ಕೂಡ ಅಂಗವೈಫಲ್ಯದಿಂದ ಬಳಲುತ್ತಿದ್ದರು. ನಡೆಯಲು ಆಗುತ್ತಿರಲಿಲ್ಲ. ಗಂಡ ಮಹದೇವಯ್ಯ ಚಿಲ್ಲರೆ ಅಂಗಡಿ ನಡೆಸುತ್ತಿದ್ದು ಹೇಗೋ ಜೀವನ ಮಾಡ್ತಾ ಇದ್ರು. ಆದ್ರೆ ಮಕ್ಕಳು ವಿಕಲಚೇತನರಾಗಿದ್ದು, ಇತ್ತೀಚಿಗೆ ತಾಯಿ ವಿಜಯಲಕ್ಷ್ಮೀ ಆರೋಗ್ಯದಲ್ಲೂ ಏರುಪೇರಾಗಿದೆ. ಇದ್ರಿಂದ ಮಾನಸಿಕವಾಗಿ ನೊಂದಿದ್ದ ವಿಜಯಲಕ್ಷ್ಮೀ ಗಂಡ ಮಹದೇವಯ್ಯ ಮನೆಯಲ್ಲಿ ಇಲ್ಲದ ವೇಳೆ ತನ್ನ ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ.
ಹೆಂಡ್ತಿ, ಮಕ್ಕಳನ್ನು ಕಳೆದುಕೊಂಡು ಗಂಡ ಮಹದೇವಯ್ಯ ಕಂಗಾಲಾಗಿದೆ. ಅಲ್ದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರೋದಕ್ಕೆ ಇಡೀ ಗ್ರಾಮವೇ ಶಾಕ್ಗೆ ಒಳಗಾಗಿದ್ದಾರೆ. ಮನೆ ಯಜಮಾನನ ಸ್ಥಿತಿ ಕಂಡು ಕಣ್ಣೀರಾಕುತ್ತಿದ್ದಾರೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿದ್ದು, ಮೂವರ ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ಮುಂದುವರೆಸಿದ್ದಾರೆ.