MYSURU NEWS : ಮೈಸೂರು ಜಿಲ್ಲೆ ನಂಜನಗೂಡು ನಗರದ ಅಶೋಕಪುರಂ ನಿಂದ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಆತಂಕದ ವಾತಾವರಣವನ್ನುಂಟುಮಾಡಿದೆ. ನಾಪತ್ತೆಯಾದವರು – ಸಿದ್ದರಾಜು ಅವರ ಮಗಳು ಲಾವಣ್ಯ (11), ಮುದ್ದೇಶ್ ಅವರ ಮಗಳು ಅಮೂಲ್ಯ (10), ಮತ್ತು ಯಶು (10) ಎಂಬ ಹೆಣ್ಣು ಮಕ್ಕಳು.
ಇನ್ನು ಮಕ್ಕಳು ನೆನ್ನೆ ಮಧ್ಯಾಹ್ನ ಮನೆ ಸಮೀಪದಲ್ಲೇ ಆಟವಾಡುತ್ತಿದ್ದಾಗ, ಸಂಜೆಯಾಗುವಷ್ಟರಲ್ಲಿ ಮನೆಗೆ ಮರಳಿಲ್ಲ. ಪೋಷಕರು ಹಲವು ಕಡೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸುತ್ತಿವೆ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ನಂಜನಗೂಡು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಪೊಲೀಸರು ಕೂಡ ಸೂಕ್ತ ಕ್ರಮ ಕೈಗೊಂಡಿದ್ದು, ಇನ್ಸ್ಪೆಕ್ಟರ್ ರವೀಂದ್ರ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಈ ತಂಡ ಈಗಾಗಲೇ ಹುಡುಕಾಟ ಕಾರ್ಯದಲ್ಲಿ ತೊಡಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಮಕ್ಕಳು ಮೈಸೂರಿನಿಂದ ಹಾಸನಕ್ಕೆ ತೆರಳಿದ್ದು, ಅಲ್ಲಿಂದ ಸುಬ್ರಮಣ್ಯ ಕಡೆಗೆ ಬಸ್ ಹತ್ತಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಂಡ ಈಗಾಗಲೇ ಸುಬ್ರಮಣ್ಯ ತಲುಪಿರುವುದಾಗಿ ತಿಳಿದುಬಂದಿದೆ.
ಇನ್ನು ಮಕ್ಕಳ ಪತ್ತೆಗಾಗಿ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದು, ಯಾವುದೇ ಮಾಹಿತಿಯನ್ನು ನೋಡಿದರೇ ಅಥವಾ ಮಕ್ಕಳನ್ನು ಕಂಡಿದ್ದರೆ ಕೂಡಲೇ ಪೊಲೀಸರು ಅಥವಾ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ವಿನಂತಿಸಲಾಗಿದೆ.