TUMAKURU: ಅಕ್ರಮ ಸಂಬಂಧಕ್ಕೆ ಅಡ್ಡಿ, ಮಗುವನ್ನೇ ಸಾಯಿಸಿದ ಪಾಪಿ?

ತುಮಕೂರು: 

ತುಮಕೂರು ತಾಲೂಕಿನ ಸಿದ್ದಲಿಂಗಯ್ಯನ ಪಾಳ್ಯದಲ್ಲಿ ನಡೆದಿರುವ ಘಟನೆಯಿದು. ಈ ಫೋಟೋದಲ್ಲಿ ಕಾಣಿಸ್ತಿದ್ದಾನಲ್ಲ ಈತನ ಹೆಸರು ಚಂದ್ರಶೇಖರ್‌ ಅಂತಾ..ಮೂಲತಃ ಚಾಮರಾಜನಗರ ಜಿಲ್ಲೆಯವನು. ಇವನು ಸುಂದರ ಸಂಸಾರವೊಂದರಲ್ಲಿ ಹುಳಿಹಿಂಡಿದ್ದ. ಈಗಾಗಲೇ ಮದುವೆಯಾಗಿ ಗಂಡನೊಂದಿಗೆ ಸುಂದರ ಸಂಸಾರವನ್ನ ನಡೆಸುತ್ತಿದ್ದ ಕಾವ್ಯಾ ಎಂಬಾಕೆಯ ತಲೆಕೆಡಿಸಿ, ಪ್ರೀತಿಯ ಹುಚ್ಚು ಹಿಡಿಸಿ ಅವಳನ್ನ ಓಡಿಸಿಕೊಂಡು ಬಂದು ಊರ್ಡಿಗೆರೆ ಸಮೀಪದ ಸಿದ್ದಲಿಂಗಯ್ಯನಪಾಳ್ಯದಲ್ಲಿ ನೆಲೆಸಿದ್ರು. ಇನ್ನು ನಾವು ಆಗಲೇ ಹೇಳಿದಂತೆ ಗಂಡನಿಂದ ಗರ್ಭ ಧರಿಸಿದ್ದ ಕಾವ್ಯಾ ಗಂಡು ಮಗುವಿಗೆ ಜನ್ಮವನ್ನೂ ನೀಡಿದ್ದಳು. ಈ ಮಗುವಿಗೆ ಮಿಥುನ್‌ ಗೌಡ ಅಂತಾ ಹೆಸರನ್ನ ಕೂಡ ಇಟ್ಟಿದ್ರು. ಮಗು ಹುಟ್ಟಿದ ಮೇಲೆಯೂ ಕಳೆದ ಕೆಲ ವರ್ಷಗಳಿಂದ ಕಾವ್ಯಾ ಮತ್ತು ಚಂದ್ರಶೇಖರ್ ಒಟ್ಟಿಗೇ ವಾಸವಿದ್ರು.

ಚಂದ್ರಶೇಖ‌ರ್ ಕ್ರಶರ್‌ನಲ್ಲಿ ಕೆಲ್ಸ ಮಾಡ್ತಿದ್ರೆ, ಕಾವ್ಯಾ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಮಗನ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ತಮ್ಮಿಬ್ಬರ ಸಂಬಂಧಕ್ಕೆ ಈ ಮಗು ಅಡ್ಡಿಯಾಗ್ತಿದೆ ಅಂತಾ ಚಂದ್ರಶೇಖರ್‌ ಆಗಾಗ ಹೆಂಡತಿ ಜೊತೆ ಜಗಳ ಮಾಡ್ತಿದ್ದನಂತೆ. ಅದೇ ರೀತಿ ಮೊನ್ನೆ ಮಾರ್ಚ್‌ 20ರಂದು ಕಾವ್ಯಾ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಮಗು ಮತ್ತು ಚಂದ್ರಶೇಖರ್‌ ಇಬ್ಬರೇ ಇದ್ರು. ಈ ವೇಳೆ ಐಸ್‌ ಕ್ರೀಮ್‌ ಕೊಡಿಸುವಂತೆ ಮಗು ಗಲಾಟೆ ತೆಗೆದಿದೆ ಎನ್ನಲಾಗಿದೆ. ಈ ವೇಳೆ ಚಂದ್ರಶೇಖರ್‌ ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ. ಮಗುವಿನ ತಲೆಯನ್ನ ಗೋಡೆಗೆ ಹೊಡೆದಿದ್ದಾನೆ. ಆಗ ಮಗು ಪ್ರಜ್ಞೆ ತಪ್ಪಿತ್ತು.

ಇನ್ನು ಮಗುವನ್ನ ಕೊಲೆ ಮಾಡಿದ್ದ ಪಾಪಿ, ಅಕ್ಕಪಕ್ಕದ ಮನೆಯವರಿಗೆ ಮಗುವಿಗೆ ಹಾವು ಕಚ್ಚಿದೆ ಅಂತಾ ಸುಳ್ಳು ಹೇಳಿದ್ದಾನೆ. ತಕ್ಷಣವೇ ಗ್ರಾಮಸ್ಥರು ಕೂಡ ಸೇರಿಕೊಂಡು ಮಗುವನ್ನ ಊರ್ಡಿಗೆರೆ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿ ಮಗು ಸಾವನ್ನಪ್ಪಿರುವ ಬಗ್ಗೆ ಖಚಿತಪಡಿಸಿದ್ದರು. ನಂತರ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಇನ್ನು ಅಂತ್ಯಕ್ರಿಯೆಗೂ ಮುನ್ನ ಸಿದ್ಧಲಿಂಗಯ್ಯನಪಾಳ್ಯದ ಎಸ್.ಆರ್.ಗಂಗಾಧರಯ್ಯ ಎಂಬುವವರು ಮಗುವಿನ ಮೃತದೇಹ ಫೋಟೊ ತೆಗೆದುಕೊಂಡಿದ್ದರು. ಮಾರ್ಚ್ 22ರಂದು ಮತ್ತೊಮ್ಮೆ ಫೋಟೊವನ್ನ ನೋಡಿದಾಗ ಸಾವಿನ ಬಗ್ಗೆ ಅನುಮಾನ ಮೂಡಿದೆ. ಈ ವೇಳೆ ಗ್ರಾಮಸ್ಥರೆಲ್ಲಾ ಸೇರಿ ಚಂದ್ರಶೇಖರ್‌ನನ್ನ ಮತ್ತೊಮ್ಮೆ ಸರಿಯಾಗಿ ವಿಚಾರಿಸಿದಾಗ ಈ ಪಾಪಿ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾನಂತೆ. ಹೀಗಾಗಿಸದ್ಯ ಗಂಗಾಧರಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕ್ಯಾತಸಂದ್ರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಯನ್ನ ನಡೆಸುತ್ತಿದ್ದಾರೆ. ಇಂದು ಮಗುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನ ಕೂಡ ನಡೆಸಲಾಗಿದೆ.

ಅದೇನೇ ಇರಲಿ.. ತನ್ನದಲ್ಲದ ತಪ್ಪಿಗೆ ಮಗುವೊಂದು ಬಲಿಯಾಗಿದ್ದು, ತಂದೆಯಲ್ಲದಿದ್ದರೂ ತಂದೆಯ ಸ್ಥಾನವನ್ನ ತುಂಬಿ ಹೃದಯವೈಶಾಲ್ಯತೆ ಮೆರೆಯಬೇಕಿದ್ದ ಪಾಪಿ ಜೈಲು ಸೇರಿದ್ದಾನೆ. ಇತ್ತ ಹೆತ್ತ ಮಗನೂ ಇಲ್ಲದೇ, ತಾನು ನಂಬಿ ಬಂದವನೂ ಇಲ್ಲದೇ ಈ ಮಹಿಳೆ ಒಬ್ಬಂಟಿಯಾಗಿದ್ದಾಳೆ.

 

Author:

...
Sub Editor

ManyaSoft Admin

share
No Reviews