BELAGAVI NEWS : ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಸಮಳ್ಳಿ ಗ್ರಾಮದ ಬಳಿ ಇರುವ ತಾತ್ಕಾಲಿಕ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿರುವ ದುಃಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೆಳಗಾವಿ–ಚೋರ್ಲಾ–ಗೋವಾ ರಸ್ತೆಯಲ್ಲಿ ವಾಹನ ಸಂಚಾರ ಮತ್ತೊಮ್ಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮಲಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆಯ ಕಾಮಗಾರಿ ನಡೆದಿದೆ. ಇದರ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸರ್ವೀಸ್ ರಸ್ತೆಯ ಸೇತುವೆ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಒಲಿದು ಹೋಗಿದೆ. ಮಳೆಯ ರಭಸಕ್ಕೆ ತಾತ್ಕಾಲಿಕ ರಸ್ತೆಯು ನದಿಗೆ ಕೊಚ್ಚಿಹೋಗಿದ್ದು, ಇದೀಗ ಈ ಮಾರ್ಗದ ಸಂಚಾರ ಅಸಾಧ್ಯವಾಗಿದೆ.
ಈ ರಸ್ತೆ ಬೆಳಗಾವಿಯಿಂದ ಚೋರ್ಲಾ ಮೂಲಕ ಗೋವಾ ಸಂಪರ್ಕ ಕಲ್ಪಿಸುತ್ತಿದ್ದು, ಪ್ರತಿದಿನ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಇದೀಗ ಪ್ರಯಾಣಿಕರು ರಾಮನಗರದ ಮಾರ್ಗವಾಗಿ ಗೋವಾಗೆ ತೆರಳಬೇಕಾಗಿದೆ.
ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ಇದೇ ತಾತ್ಕಾಲಿಕ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡಿತ್ತು. ಅಧಿಕಾರಿಗಳು ತಾತ್ಕಾಲಿಕ ಪರಿಹಾರ ನೀಡಿದರೂ ಮಳೆಯ ಅರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತೊಮ್ಮೆ ಮರುಕಳಿಸಿದೆ. ಇನ್ನು ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.