ಕೊರಟಗೆರೆ : ಕೊರಟಗೆರೆಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ್ ಹಾಗೂ ಪಟ್ಟಣ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಉಮೇಶ್ ಭೇಟಿ ನೀಡಿ ಸಾರ್ವಜನಿಕರ ಗೊಂದಲಕ್ಕೆ ತಿಳಿ ಹೇಳಿದರು. ಪಟ್ಟಣ ಪಂಚಾಯ್ತಿಯಿಂದ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಎಫ್ಎಸ್ಟಿಪಿ ಘಟಕ ನಿರ್ಮಾಣಕ್ಕೆ ಸರ್ವೇ.ನಂ.181ರಲ್ಲಿ ಸರ್ಕಾರಿ ಗೋಮಾಳದಲ್ಲಿ 3 ಎಕರೆ ಭೂಮಿ ನೀಡುವಂತೆ ಪಟ್ಟಣ ಪಂಚಾಯಿತಿ ಕೇಳಿಕೊಂಡಿತ್ತು. ಡಿಸಿ ಆದೇಶದ ಅನ್ವಯ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಸರ್ವೇ ಮಾಡಿದ್ದರು. ಆದರೆ ಇಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಜೀವನಕ್ಕೆಂದು ಇರುವ ಭೂಮಿಯನ್ನು ಕಿತ್ತುಕೊಂಡು ಕಸ ವಿಲೇವಾರಿ ಘಟಕಕ್ಕೆ ಭೂ ಮಂಜೂರು ಮಾಡಬೇಡಿ. ಗಂಗಾಧರೇಶ್ವರ ಕೆರೆಗೆ ಸದರಿ ಕಾಲುವೆ ಮೂಲಕವೇ ಮುಂದೆ ಸಾಗುತ್ತಿದೆ. ಕಾಲುವೆ ನೀರನ್ನು ಪ್ರಾಣಿ ಪಕ್ಷಿಗಳು ಸೇವಿಸುತ್ತವೆ. ತ್ಯಾಜ್ಯ ವಸ್ತುವಿನಿಂದ ಪರಿಸರದ ಮಾಲಿನ್ಯ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರಲಿದೆ. ಹೀಗಾಗಿ ಕಸ ವಿಲೇವಾರಿ ಘಟಕಕ್ಕೆ ಜಾಗ ಮಂಜೂರು ಮಾಡಬೇಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರಲ್ಲಿದ್ದ ಗೊಂದಲಕ್ಕೆ ತಹಶೀಲ್ದಾರ್ ಮಂಜುನಾಥ್ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಉಮೇಶ್ ಸಾರ್ವಜನಿಕರಿಗಾಗಿ ಪಕ್ಷಿ ಪ್ರಾಣಿಗಳಿಗಾಗಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಇಲ್ಲಿ ಒಂದು ಒಳ್ಳೆಯ ದೊಡ್ಡ ಯೋಜನೆ ನಡೆಯುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಯೋಜನೆಗಳು ಮಾಡುವುದು ಎಂದು ಸಾರ್ವಜನಿಕರಿಗೆ ತಿಳಿಸಿ ಗೊಂದಲಕ್ಕೆ ತೆರೆ ಎಳೆದು ತಮ್ಮ ಕೆಲಸಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರಿಗೆ ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ತಹಶೀಲ್ದಾರ್ ಭೇಟಿ ವೇಳೆ ಕಂದಾಯ ಇಲಾಖೆಯ ಆರ್.ಐ ಬಸವರಾಜು, ಆರೋಗ್ಯ ನಿರೀಕ್ಷಕ ಹುಸೇನ್, ಸರ್ವೇಯರ್ ನಾಗಲಾಂಭಿಕೆ, ಪಟ್ಟಣ ಪಂಚಾಯ್ತಿಯ ವೇಣುಗೋಪಾಲ್ ಸೇರಿದಂತೆ ನೂರಾರು ಜನ ಸಾರ್ವಜನಿಕರು ಇದ್ದರು.