HASSAN : ಕಲ್ಲು ಗಣಿಗಾರಿಕೆ ದುರಂತ | ಓರ್ವ ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ

HASSAN NEWS : ಹಾಸನ ಜಿಲ್ಲೆಯ ಶಾಂತಿಗ್ರಾಮ ತಾಲ್ಲೂಕಿನ ದೂಮಗೆರೆ ಗ್ರಾಮದಲ್ಲಿ ನಡೆದ ಭೀಕರ ಕಲ್ಲು ಗಣಿಗಾರಿಕೆ ಅವಘಡದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ನೆನ್ನೆ ಸಂಭವಿಸಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಮೃತನನ್ನು ಮಣಿ ಎಂದು ಗುರುತಿಸಲಾಗಿದೆ. ಅವರು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಅವರನ್ನು ತಕ್ಷಣವೇ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿಯಲ್ಲೇ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇನ್ನು ಗಾಯಗೊಂಡ ನಾಲ್ವರು ಕಾರ್ಮಿಕರು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಅವರ ಸ್ಥಿತಿಯೂ ಗಂಭೀರವಾಗಿದ್ದು, ವೈದ್ಯರು ಗಮನದಿಂದ ಚಿಕಿತ್ಸೆ ನೀಡುತ್ತಿದ್ದಾರೆ.

ಅವಘಡವು ಬಂಡೆ ಕುಸಿದು ಬಿದ್ದ ಪರಿಣಾಮ ಸಂಭವಿಸಿದ್ದು, ಕ್ವಾರಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದ್ದಿದ್ದೇ ಅನಾಹುತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಈ ದುರ್ಘಟನೆಯ ಮಾಹಿತಿ ಲಭಿಸುತ್ತಲೇ ಹಾಸನ ಎಸ್‌ಪಿ ಮುಹಮ್ಮದ್ ಸುಜೀತಾ ಹಾಗೂ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಹೆಚ್ಚಿನ ವಿವರ ನಿರೀಕ್ಷೆಯಲ್ಲಿದೆ.

ದುರ್ಘಟನೆ ಸಂಭವಿಸಿದ ಗ್ರಾನೈಟ್ ಕ್ವಾರಿ ದೇವರಾಜ್ ಎಂಬುವವರಿಗೆ ಸೇರಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಅವರ ವಿರುದ್ಧ ದೂರು ದಾಖಲಿಸಲು ಸೂಚನೆ ನೀಡಿದ್ದಾರೆ. ದೇವರಾಜ್ ಪುತ್ರ ಅರ್ಜುನ್‌ನ್ನು ಶಾಂತಿಗ್ರಾಮ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಘಟನೆ ಮುಚ್ಚಿಹಾಕಲು ಯತ್ನಿಸಿದ್ದ ಪ್ರಕರಣದ ಸಂಬಂಧ ಕೆಲವರನ್ನೂ ವಶಕ್ಕೆ ತೆಗೆದುಕೊಂಡು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews