MANDYA NEWS : 18 ವರ್ಷಗಳ ನಿರೀಕ್ಷೆಯ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಜಯೋತ್ಸವ ಒಂದು ಕಡೆ ಸಂಭ್ರಮ ತುಂಬಿದ್ದರೆ, ಇನ್ನೊಂದು ಕಡೆ ಅಷ್ಟೇ ಭಾರೀ ದುಃಖವನ್ನು ತಂದಿದೆ. ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆಯುತ್ತಿದ್ದ ವಿಜಯೋತ್ಸವದ ವೇಳೆಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ರಾಷ್ಟ್ರವನ್ನು ಶೋಕಸಾಗರಕ್ಕೆ ಎಳೆದುಕೊಂಡಿದೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ನಿವಾಸಿಯಾದ ಪೂರ್ಣಚಂದ್ರ (27), ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ. ಈ ವರ್ಷವೇ ಮದುವೆಯಾಗಬೇಕೆಂದು ಕುಟುಂಬವು ಹುಡುಗಿ ಹುಡುಕಾಟದಲ್ಲಿತ್ತು. ಕೆಲ ದಿನಗಳ ಹಿಂದೆ ಹುಡುಗಿ ನೋಡಲು ಮಂಡ್ಯಕ್ಕೆ ಬಂದಿದ್ದ ಅವರು, ಸ್ನೇಹಿತರ ಜೊತೆ ಆರ್ಸಿಬಿಯ ಜಯೋತ್ಸವ ನೋಡಲು ಬೆಂಗಳೂರಿಗೆ ತೆರಳಿದ್ದರು. ಕ್ರೀಡಾಂಗಣದಲ್ಲಿ ಜನಸಂದಣಿ ಹೆಚ್ಚಾದಾಗ ಉಂಟಾದ ಕಾಲ್ತುಳಿತದಲ್ಲಿ ಅವರು ಸಾವಿಗೀಡಾದರು. ಮೆಟ್ರೋ ಇಳಿದ ನಂತರ ಸ್ನೇಹಿತರು ಬೇರೆಬೇರೆಯಾಗಿ ಹೋಗಿದ್ದರಿಂದ ಯಾರಿಗೂ ಕೂಡಾ ತಕ್ಷಣ ಮಾಹಿತಿ ಸಿಕ್ಕಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯು ಹರಡಿದ ಬಳಿಕ ಕುಟುಂಬಸ್ಥರಿಗೆ ಸುದ್ದಿ ತಿಳಿಯಿತು.
"ಮೊನ್ನೆ ರಾತ್ರಿ ಸಿಹಿ ತಿಂದು ಎಲ್ಲರೂ ಖುಷಿಯಾಗಿದ್ದೆವು. ಅವನು ಮದುವೆ ಆಗಬೇಕೆಂದು ಕನಸು ಕಟ್ಟಿದ್ದೆವು. ಈಗ ಮಗನ ಶವ ನೋಡಿ ನರಳುತ್ತಿದ್ದೇವೆ" ಎಂದು ಮಗನ ತಾಯಿ ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಯ ಬಳಿಕ ಪೂರ್ಣಚಂದ್ರನ ಮೃತದೇಹವನ್ನು ಇಂದು ಗ್ರಾಮಕ್ಕೆ ತರಲಾಯಿತು. ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಇಟ್ಟು, ನಂತರ ಲಿಂಗಾಯತ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
RCB ಗೆದ್ದ ಖುಷಿಯಲ್ಲಿ ಆಡಳಿತ ವ್ಯವಸ್ಥೆ ಮರೆತಿದ್ದ ನಿರ್ವಹಣಾ ಘಟಕಗಳು, ಈ ರೀತಿಯ ಅಪಘಾತಕ್ಕೆ ಕಾರಣವೆಂದೇ ಹಲವು ಜನ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪೊಲೀಸರು ಹಾಗೂ ಮೇಲುಸ್ತುವಾರಿ ಸಂಘಟನೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.