ಶಿರಾ:
ಶಿರಾ ನಗರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಳವಡಿಸಬೇಕಾದ ನಾಮಫಲಕ ಹಾಗೂ ಸುರಕ್ಷತಾ ಕ್ರಮಗಳಿಲ್ಲದೆ ಬೇಕಾಬಿಟ್ಟಿ ರಸ್ತೆ ಕಾಮಗಾರಿ ಕೆಲಸ ನಿರ್ಮಾಣ ಮಾಡಲಾಗುತ್ತಿದ್ದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಸವಾರರು ಆರೋಪಿಸುತ್ತಿದ್ದಾರೆ.
ಶಿರಾ ಮಾರ್ಗವಾಗಿ ಅಮರಾಪುರ ಮತ್ತಿತರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ನಿರ್ಮಾಣ ಜವಾಬ್ದಾರಿ ಹೊತ್ತ ಸಂಬಂಧಪಟ್ಟ ಗುತ್ತಿಗೆದಾರರು ಸುರಕ್ಷತಾ ಕ್ರಮ ಅನುಸರಿಸದೆ, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ, ರಾಜ್ಯ ಹೆದ್ದಾರಿ ಮತ್ತು ನೆರೆಯ ಆಂದ್ರಪ್ರದೇಶ ಸೇರಿದಂತೆ ಚಿತ್ರದುರ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಬರಗೂರು ಮೂಲಕ ಅಮರಾಪುರ ಮತ್ತು ಮಂಗಳವಾಡ, ಪಾವಗಡ ಸೇರಿದಂತೆ ಮತ್ತಿತರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಈ ಭಾಗದಲ್ಲಿ ಬಸ್ಸು, ಲಾರಿ, ಟ್ರಾಕ್ಟರ್, ಕಾರು, ಆಟೋಗಳು ಮತ್ತು ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದೆ. ರಸ್ತೆಯಲ್ಲಿ ಬಸ್ಗಳು ವೇಗವಾಗಿ ಬರುವುದರಿಂದ ರಸ್ತೆ ನಿರ್ಮಾಣಕ್ಕಾಗಿ ಹರಡಿರುವ ಜಲ್ಲಿ ಕಲ್ಲುಗಳಿಂದ ದ್ವಿಚಕ್ರ ವಾಹನಗಳ ಸವಾರರು ಜಾರಿ ಬಿದ್ದು ಸಣ್ಣ ಪುಟ್ಟ ಗಾಯವಾಗಿರುವ ಘಟನೆ ನಡೆಯುತ್ತಿದೆ. ಆದರೂ ಇಲ್ಲಿನ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಚನಾಫಲಕಗಳನ್ನು ಅಳವಡಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ರಸ್ತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ, ರಸ್ತೆ ತಿರುವಿದೆ, ನಿಧಾನವಾಗಿ ಚಲಿಸಿ? ಎಂಬ ನಾಮಫಲಕ ಅಳವಡಿಸುವುದು ಕಡ್ಡಾಯ ಮಾಡಿದೆ. ಆದರೆ ಗುತ್ತಿಗೆದಾರರು ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ.
ಕೆಲವು ಸ್ಥಳಗಳಲ್ಲಿ ರಸ್ತೆ ತಿರುವಿನ ಸೂಚನೆ, ಕಾಮಗಾರಿ ಪ್ರಗತಿ ಬಗ್ಗೆ ನಾಮಫಲಕ ಗೋಚರಿಸದೆ, ವೇಗವಾಗಿ ಬರುವ ದ್ವಿಚಕ್ರ ವಾಹನ ಸವಾರರು ಮತ್ತು ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಾಮಗಾರಿ ಮಾಡುವ ಸ್ಥಳದಲ್ಲಿ ಕಡ್ಡಾಯ ಸುರಕ್ಷ ತಾ ನಾಮಫಲಕ ಹಾಗೂ ಬ್ಯಾರಿಕೇಡ್ ಅಳವಡಿಕೆಗೆ ಗುತ್ತಿಗೆದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ಆದೇಶಿಸಬೇಕು ಎಂದು ಅಲ್ಲಿನ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.