ಶಿರಾ:
ಶಿರಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷರಾಗಿ ಅಂಜನ್ ಕುಮಾರ್ ಅಯ್ಕೆಯಾಗಿದ್ದಾರೆ. ನಗರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಶಾಸಕ ಟಿ.ಬಿ ಜಯಚಂದ್ರ ಅವರ ಮನೆಗೆ ಅಂಜನ್ ಕುಮಾರ್ ಭೇಟಿ ನೀಡಿದರು. ಈ ವೇಳೆ ನಗರ ಅಧ್ಯಕ್ಷರಾಗಿ ಆಯ್ಕೆಯಾದ ಅಂಜನ್ಗೆ ಜಯಚಂದ್ರ ಅವರು ಹೂವಿನ ಹಾರ ಹಾಕಿ ಅಭಿನಂದನೆ ಸಲ್ಲಿಸಿ, ಆಶೀರ್ವದಿಸಿದರು. ಈ ವೇಳೆ ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವಂತೆ ಅಂಜನ್ಗೆ ಜಯಚಂದ್ರ ಕಿವಿಮಾತು ಹೇಳಿದರು.
ಈ ವೇಳೆ ನೂತನ ಅಧ್ಯಕ್ಷರಾದ ಅಂಜನ್ ಕುಮಾರ್ ಮಾತನಾಡಿ, ನಮ್ಮ ಕ್ಷೇತ್ರದ ನಮ್ಮೆಲ್ಲರ ಹೆಮ್ಮೆಯ ಜನಪ್ರಿಯ ಶಾಸಕರು ಟಿ. ಬಿ ಜಯಚಂದ್ರಅವರು ಪಕ್ಷದ ಸಂಘಟನಾತ್ಮಕ ಶಕ್ತಿಯನ್ನು ಗುರುತಿಸಿ ನಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ನಗರ ಮತ್ತು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಬೆಳೆಸುತ್ತೇವೆ. ಜಯಚಂದ್ರ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.