ಚಿತ್ರದುರ್ಗ : ತುಮಕೂರು-ಶಿರಾ-ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ನಿರ್ಮಾಣವಾಗಲಿರುವ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಜೊತೆಗೆ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗವನ್ನು ನಿರ್ಮಿಸಲು ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ರಾಜ್ಯ ಯೋಜನೆ ಸಚಿವ ಡಾ. ಸುಧಾಕರ್ ಹಾಗೂ ಚಳ್ಳಕೆರೆ ಶಾಸಕ ರಘುಮೂರ್ತಿ ಕೂಡ ಉಪಸ್ಥಿತರಿದ್ದರು.
ಚಿತ್ರದುರ್ಗದಲ್ಲಿ ನಡೆದ ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲ್ವೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಟಿ. ಬಿ ಜಯಚಂದ್ರ ಅವರು ಈ ಭಾಗದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆಗೆ ಹೆಚ್ಚಿನ ಸಹಾಯವಾಗಬೇಕಾದರೆ ರೈಲ್ವೆ ಸರಕು ಸಾಗಣೆ ಮಾರ್ಗ ಅವಶ್ಯಕ ಎಂದು ಒತ್ತಾಯಿಸಿದರು. ಅಲ್ದೇ ಮಧ್ಯ ಕರ್ನಾಟಕದ ಆರ್ಥಿಕ ಪ್ರಗತಿಗೆ ಇದು ಪೂರಕವಾಗಲಿದೆ. ತುಮಕೂರು ಸುತ್ತಮುತ್ತ 30 ಮಿನಿ ಫುಡ್ ಪಾರ್ಕ್ಗಳ ನಿರ್ಮಿಸುವ ಪ್ರಸ್ತಾವವೂ ಇದೆ, ಅಲ್ಲದೇ ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆಗಳು ಇದ್ದು, ಈ ಹಿನ್ನೆಲೆಯಲ್ಲಿ, ತುಮಕೂರು-ಶಿರಾ - ಚಿತ್ರದುರ್ಗ ನಡುವೆ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ ನಿರ್ಮಾಣವು ಅತ್ಯಂತ ಸೂಕ್ತ ನಿರ್ಧಾರವಾಗಲಿದ್ದು, ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಜಯಚಂದ್ರ ತಿಳಿಸಿದರು.
ಕೇಂದ್ರ ಸರ್ಕಾರ ದೇಶದ ಪೂರ್ವ ಭಾಗವನ್ನು ಸಂಪರ್ಕಿಸುವ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ ಪಂಜಾಬ್ ಹಾಗೂ ಹರಿಯಾಣ ರೈತರಿಗೆ ಸಾಕಷ್ಟು ಅನುಕೂಲವಾಗಿದೆ, ಇದೇ ಮಾದರಿಯಲ್ಲಿ ತುಮಕೂರು-ಶಿರಾ-ಚಿತ್ರದುರ್ಗ ಮಾರ್ಗದಲ್ಲೂ ರೈಲು ಯೋಜನೆ ವಿಸ್ತರಿಸಿದರೆ ಕೃಷಿ ಆಧಾರಿತ ಉದ್ಯಮಗಳಿಗೆ ಮತ್ತು ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ ಎಂದರು.