ಶಿರಾ:
ಶಿರಾದಲ್ಲಿರೋ ಬಹುತೇಕ ವಸತಿ ನಿಲಯಗಳು ಶೋಚನೀಯ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳ ಸ್ಥಿತಿ ಹೇಳತೀರದಾಗಿದೆ. ಒಂದ್ಕಡೆ ಕಟ್ಡಡದ ಕೊರತೆ ಇದ್ದರೆ ಮತ್ತೊಂದು ಕಡೆ ಶುಚಿತ್ವ ಅನ್ನೋದು ಮರೀಚಿಕೆಯಾಗಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆ ಆಗ್ತಾ ಇದೆ.
ಹೌದು ಶಿರಾ ತಾಲೂಕಿನ ಕಟಾವೀರನಹಳ್ಳಿಯಲ್ಲಿರೋ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಸ್ಥಿತಿ ಶೋಚನೀಯವಾಗಿದೆ. ಹಾಸ್ಟೆಲ್ನ ಕೊಠಡಿಗಳು ಹಾಳಾಗಿದ್ದು, ಕಟ್ಡಡಗಳು ಬಿರುಕು ಬಿಟ್ಟಿವೆ. ಜೊತೆಗೆ ಫ್ಯಾನುಗಳು ಕೂಡ ಇಲ್ಲ. ವಿದ್ಯಾರ್ಥಿಗಳಿಗೆ ಸೊಳ್ಳೆ, ಇಲಿ, ಹೆಗ್ಗಣಗಳ ಕಾಟ ಇದೆ. ಅಲ್ಲದೇ ಸ್ನಾನದ ಮನೆಗಳು ಅಸ್ವಚ್ಛತೆಯಿಂದ ಕೂಡಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಇನ್ನು ಈ ಹಾಸ್ಟೆಲ್ನಲ್ಲಿ 5 ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಇದ್ದು, ಇವರಿಗೆ ಕೇವಲ ಮೂರೇ ಮೂರು ರೂಂಗಳು ಇವೆ. ರೂಮ್ ಗಳು ನೋಡಲು ಪುಟ್ಟ ಗೋದಾಮಿನಂತೆ ಇದ್ದು ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ. ಅಲ್ಲದೇ ಈ ಕೊಠಡಿಗಳು ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ಸೋರುತ್ತದೆ. ವಿದ್ಯಾರ್ಥಿಗಳು ಬಳಸುವ ಬೆಡ್ ಮತ್ತು ಬೆಡ್ಶೀಟ್, ಸೊಳ್ಳೆ ಪರದೆ ಹಳೆಯದಾಗಿದ್ದು ಗಲೀಜಾಗಿವೆ. ವಿದ್ಯಾರ್ಥಿಗಳಿಗೆ ಹೊಸದಾಗಿ ಬೆಡ್, ಬೆಡ್ಶೀಟ್ಗಳನ್ನು ಕೊಡುವ ಕೆಲಸ ಆಗ್ತಾ ಇಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದಲ್ಲದೇ ವಸತಿ ನಿಲಯದ ಸ್ವಲ್ಪ ದೂರದಲ್ಲಿ ಶೌಚಾಲಯವಿದ್ದು ಇಲಿ ಹೆಗ್ಗಣಗಳ ಕಾಟ ಹೆಚ್ಚಾಗಿದ್ದು ಮಕ್ಕಳು ಓದಲು, ಬರೆಯಲು ಸೂಕ್ತವಾದ ವಾತಾವರಣ ಸಿಗುತ್ತಿಲ್ಲ. ಜೊತೆಗೆ ವಸತಿ ಶಾಲೆಗೆ ಒಂದು ಕಾಂಪೌಂಡು ಕೂಡ ಇಲ್ಲವಾಗಿದ್ದು, ರಾತ್ರಿ ವೇಳೆ ವಿದ್ಯಾರ್ಥಿಗಳು ಭಯದಿಂದ ವಾಸ ಮಾಡಲಾಗ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಅಧಿಕಾರಿಗಳು, ಶಿಕ್ಷಣ ಇಲಾಖೆ ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ತಾ ಇಲ್ಲ.