ತುಮಕೂರು : ತುಮಕೂರಿನಲ್ಲಿ ಇಂದು ರೌಡಿಶೀಟರ್ಗಳ ಪರಿವರ್ತನಾ ಸಭೆ ನಡೆದಿದ್ದು, ಸನ್ನಡತೆ ಆಧಾರದಲ್ಲಿ ಬರೋಬ್ಬರಿ 74 ಮಂದಿಯ ವಿರುದ್ಧದ ರೌಡಿಶೀಟರ್ ಪ್ರಕರಣವನ್ನ ರದ್ದುಗೊಳಿಸಲಾಗಿದೆ. ನಗರದ ಡಿಎಆರ್ ಮೈದಾನದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಅಶೋಕ್ ವೆಂಕಟ್ ಅವರ ನೇತೃತ್ವದಲ್ಲಿ ನಡೆದ ರೌಡಿಶೀಟರ್ಗಳ ರಿವ್ಯೂ ಮೀಟಿಂಗ್ನಲ್ಲಿ ಬರೋಬ್ಬರಿ 91 ರೌಡಿಶೀಟರ್ಗಳು ಭಾಗಿಯಾಗಿದ್ರು. ಈ ಪೈಕಿ 74 ಮಂದಿಯ ರೌಡಿಶೀಟರ್ ಪ್ರಕರಣವನ್ನ ರದ್ದುಗೊಳಿಸಲಾಗಿದೆ.
ಜಿಲ್ಲೆಯಲ್ಲಿ 901 ರೌಡಿಶೀಟರ್ಗಳಿದ್ದು, ಈ ಪೈಕಿ ಸನ್ನಡತೆ ಆಧಾರದಲ್ಲಿ ೯೧ ಮಂದಿ ರೌಡಿಶೀಟರ್ಗಳಿಗೆ ಇಂದು ಬುಲಾವ್ ನೀಡಲಾಗಿತ್ತು. ಎಲ್ಲರ ಸದ್ಯದ ಜೀವನ, ನಡತೆ ಹಾಗೂ ಅವರ ಕೆಲಸದ ಬಗ್ಗೆ ಮಾಹಿತಿಯನ್ನ ಸಂಗ್ರಹಿಸಿ, ಕಳೆದ 8-10 ವರ್ಷದಿಂದ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇರೋರಿಗೆ ಇವತ್ತಿನ ರಿವ್ಯೂ ಮೀಟಿಂಗ್ಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಇಲಾಖೆಯಿಂದ ನೋಟಿಸ್ ನೀಡಿದ ಹಿನ್ನೆಲೆ ರೌಡಿಶೀಟರ್ಗಳು ಇವತ್ತು ಪೊಲೀಸರ ಮುಂದೆ ಹಾಜರಾಗಿದ್ರು. ಜಿಲ್ಲೆಯ ಐದು ಉಪವಿಭಾಗಗಳಿಂದ ಒಟ್ಟು 91 ಮಂದಿ ರೌಡಿಶೀಟರ್ಗಳು ಭಾಗಿಯಾಗಿದ್ರು. ತುಮಕೂರು ಎಸ್ಪಿ ಅಶೋಕ್ ವೆಂಕಟ್ ಸಮ್ಮುಖದಲ್ಲಿ ಇತರೆ ಹಿರಿಯ ಅಧಿಕಾರಿಗಳು ರೌಡಿಶೀಟರ್ ಗಳನ್ನ ಪರಿಶೀಲನೆ ನಡೆಸಿದ್ರು.
ಇನ್ನು ರೌಡಿಶೀಟರ್ಗಳ ಈ ರಿವ್ಯೂ ಮೀಟಿಂಗ್ನಲ್ಲಿ ವಯಸ್ಸಾದ ಅಜ್ಜನಿಂದ ಹಿಡಿದು ಮೂವತ್ತು, ನಲವತ್ತು ವರ್ಷದವರು ಕೂಡ ಭಾಗಿಯಾಗಿದ್ರು. ಆದ್ರೆ ಕಳೆದ 10 ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದೇ ಇರೋದ್ರಿಂದ ಪೊಲೀಸರು ರಿವ್ಯೂ ನಡೆಸಿ, ಜೊತೆಗೆ ಮುಂದೆಯೂ ಇಂತಹ ಕೆಲಸಗಳಿಗೆ ಕೈ ಹಾಕದೇ ಇರುವಂತೆ ಎಚ್ಚರಿಕೆಯನ್ನ ನೀಡಿ ಪೊಲೀಸರು ಇವರ ವಿರುದ್ಧದ ರೌಡಿಶೀಟರ್ ಪ್ರಕರಣವನ್ನು ರದ್ದುಗೊಳಿಸಿದ್ದಾರೆ.
ಅದೇನೆ ಇರಲಿ..ಕೋಪದ ಕೈಗೆ ಬುದ್ದಿ ಕೊಟ್ಟು ಅಪರಾಧ ಎಸಗಿ ಅದಕ್ಕೆ ಶಿಕ್ಷೆ, ಪ್ರಾಯಶ್ಚಿತ ಎಲ್ಲವನ್ನ ಅನುಭವಿಸಿ ಇದೀಗ ಒಳ್ಳೆಯ ರೀತಿಯಲ್ಲಿ ಜೀವನ ನಡೆಸಲು ಮುಂದಾಗಿರೋ 74 ಮಂದಿಗೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಅವರ ವಿರುದ್ಧದ ರೌಡಿ ಶೀಟ್ ಕ್ಲೋಸ್ ಮಾಡಿ ಸಿಹಿಸುದ್ದಿ ಕೊಟ್ಟಿದ್ದು, ಉಳಿದವರು ಕೂಡ ಬುದ್ಧಿ ಕಲಿತು ಒಳ್ಳೆಯ ದಾರಿ ಹಿಡಿಯಬೇಕಿದೆ.