TUMAKURU NEWS : ತುಮಕೂರು ಗ್ರಾಮಾಂತರ ಶಾಸಕರಾದ ಸುರೇಶ್ ಗೌಡರೇ ನೋಡಲೇ ಬೇಕಾದ ಸುದ್ದಿ ಇದು, ಕ್ರಷರ್ಗಳಿಂದ ಸಾಮಾನ್ಯ ಜನರಿಗೆ ತೊಂದ್ರೆ ಆಗ್ತಾ ಇದ್ರು ತಿರುಗಿ ನೋಡ್ತಾ ಇಲ್ಲ ಯಾಕೆ..? ಕ್ರಷರ್ಗಳಿಂದಾಗಿ ರಸ್ತೆಗಳೇ ಹಾಳಾಗಿ ಬಿದ್ದಿದ್ದು, ಯಮಲೋಕಕ್ಕೆ ಗುಂಡಿಗಳ ರಸ್ತೆ ರಹದಾರಿಯಾಗಿವೆ… ರಸ್ತೆಗಳಲ್ಲಿರೋ ಗುಂಡಿಗಳಿಗೆ ಜನರು ಬಿದ್ದು ಆಸ್ಪತ್ರೆ ಪಾಲಾಗ್ತಾ ಇದ್ರು ಅಧಿಕಾರಿಗಳಾಗಲಿ, ಅಥವಾ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ತಾ ಇಲ್ಲ.. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು. ಅಷ್ಟಕ್ಕೂ ಹೀಗೆ ವಿನೂತನವಾಗಿ ಪ್ರತಿಭಟನೆ ನಡೆಸಿರೋದು ತುಮಕೂರು ತಾಲೂಕಿನ ಹೊಳಕಲ್ಲು ಪಾಳ್ಯ ಬಳಿ.
ತುಮಕೂರು ತಾಲೂಕಿನ ಪಂಡಿನಹಳ್ಳಿ ಹ್ಯಾಂಡ್ ಪೋಸ್ಟ್ ವ್ಯಾಪ್ತಿಗೆ ಬರುವ ಕೋತಮಾರನಹಳ್ಳಿ ಸುಮಾರು ನಾಲ್ಕಕ್ಕೂ ಹೆಚ್ಚು ಕ್ರಷರ್ಗಳು ನಡೆಯುತ್ತಿವೆ. ಕ್ರಷರ್ಗಳ ನಡೆಯುತ್ತಿರೋದ್ರಿಂದ ಲಾರಿ, ಟ್ರಕ್ಗಳ ಓಡಾಟ ಹೆಚ್ಚಾಗಿದ್ದು ಹೊಳಕಲ್ಲು ಗ್ರಾಮದಲ್ಲಿ ಹಾದುಹೋಗುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಜನರು ಹೈರಾಣಾಗಿದ್ದಾರೆ, ಒಂದ್ಕಡೆ ಕ್ರಷರ್ಗಳ ಲಾರಿಗಳಿಂದ ಬಿದ್ದಿರೋ ಗುಂಡಿಗಳು ಒಂದು ಸಮಸ್ಯೆ ಆದ್ರೆ, ಮತ್ತೊಂದ್ಕಡೆ ಲಾರಿಗಳ ಓಡಾಟದಿಂದ ಧೂಳು ಹೆಚ್ಚಾಗಿದ್ದು ಅಲ್ಲಿನ ಜನರಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನು ಸಂಜೆ 6 ಗಂಟೆಯಿಂದ ಬೆಳಗ್ಗೆ ಸುಮಾರು 9 ಗಂಟೆವರೆಗೂ ಲಾರಿಗಳ ಓಡಾಟ ಹೆಚ್ಚಾಗಿರುತ್ತದೆ. ಸಾವಿರಾರು ಕ್ರಷರ್ ಲಾರಿಗಳು ಓಡಾಡಿ ಓಡಾಡಿ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆಯಲ್ಲಿ ಲೆಕ್ಕವಿಲ್ಲದಷ್ಟು ಗುಂಡಿಗಳು ಬಿದ್ದಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ಸವಾರರು ಬಿದ್ದು ಆಸ್ಪತ್ರೆ ಪಾಲಾಗ್ತಾ ಇದ್ದಾರೆ. ಹೀಗೆ ಆದ್ರೆ ಮುಂದೊಂದು ದಿನ ಅಮಾಯಕ ಜೀವ ಬಲಿಯಾಗೋದಂಥೂ ಸತ್ಯ. ರಸ್ತೆ ಮಾಡುವಂತೆ ಮನವಿ ಮಾಡಿದ್ರು ಇತ್ತ ಯಾವುದೇ ಅಧಿಕಾರಿಯಾಗಲಿ ಅಥವಾ ಶಾಸಕರಾಗಲಿ ಇತ್ತ ತಿರುಗಿ ನೋಡ್ತಾ ಇಲ್ಲ ಅಂತಾ ಗ್ರಾಮಸ್ಥರು ಗುಂಡಿ ಬಿದ್ದ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು, ಗುಂಡಿಯಲ್ಲೇ ಮಲಗಿ, ಕ್ರಷರ್ಲಾರಿಗಳನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು ಎನ್ನದೇ ಭಾಗಿಯಾಗಿ ರಸ್ತೆ ಸರಿಪಡಿಸುವಂತೆ ಆಗ್ರಹಿಸಿದ್ರು.
ಇನ್ನು ಲಾರಿ ಚಾಲಕರು ರಾತ್ರಿ ವೇಳೆ ಹಿಟ್ ಅಂಡ್ ರನ್ ಮಾಡಿಕೊಂಡು ಹೋಗ್ತಾ ಇದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಇದ್ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.