RAICHURU RAIN EFFECT : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಸಂಭವಿಸಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ದಾಳಿಂಬೆ ಬೆಳೆ ನಾಶವಾಗಿರುವ ಘಟನೆ ನಡೆದಿದೆ. ಗೊಬ್ಬರಕಲ್, ಹುಡಾ, ಸಾಲಗುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ 30 ಎಕರೆಷ್ಟು ದಾಳಿಂಬೆ ಗಿಡಗಳು ನೆಲಕ್ಕೆ ಬಿದ್ದು ಹಾಳಾಗಿವೆ.
ನಷ್ಟ ಅನುಭವಿಸಿದವರು ಮಲ್ಲಯ್ಯಸ್ವಾಮಿ, ಶಿವಲಿಂಗಯ್ಯಸ್ವಾಮಿ ಹಾಗೂ ಹನುಮಂತರೆಡ್ಡಿ ಎಂಬ ರೈತರು. ಪ್ರತಿ ಎಕರೆಗೆ ಸುಮಾರು ₹3 ಲಕ್ಷ ರೂ. ವೆಚ್ಚ ಮಾಡಿ ಬೆಳೆದ ದಾಳಿಂಬೆ ಇನ್ನೂ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ತಲುಪಬೇಕಿತ್ತು. ಆದರೆ ಅಕಾಲಿಕ ಮಳೆಯ ಆರ್ಭಟಕ್ಕೆ ಎಲ್ಲವೂ ಮಣ್ಣುಪಾಲಾಗಿದೆ.
ಈ ದಾಳಿಂಬೆ ಹಣ್ಣುಗಳು ಕೆ.ಜಿಗೆ ₹130 ರಿಂದ ₹160 ರಷ್ಟು ಮೌಲ್ಯ ಪಡೆಯುತ್ತಿದ್ದರು. ಈಗ ಬೆಳೆ ನಾಶವಾದ ಪರಿಣಾಮ, ಲಕ್ಷಾಂತರ ರೂಪಾಯಿ ಆದಾಯ ನಿರೀಕ್ಷಿಸಿದ್ದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿದ್ದು, ಕೂಡಲೇ ಸರ್ಕಾರ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.