GUBBI NEWS : ಸರ್ಕಾರಿ ಶಾಲೆಗಳು ಅಂದ್ರೆ ಮೂಗು ಮರಿಯೋರೆ ಹೆಚ್ಚು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದಿರಲಿ, ಅತ್ತ ತಲೆ ಹಾಕಿಕೂಡ ನೋಡಲ್ಲ. ತಮ್ಮ ಸ್ವಂತ ಊರಲ್ಲಿಯೇ ತಾವು ಓದಿದ ಸರ್ಕಾರಿ ಶಾಲೆ ಇದ್ರು, ಎಷ್ಟೋ ಜನರು ಅದರ ಅಭಿವೃದ್ಧಿಗೆ ಯೋಚನೆ ಮಾಡಲ್ಲ. ನಮಗ್ಯಾಕೆಬೇಕು ಊರ ಉಸಾಬರಿ ಅಂತ ಸುಮ್ಮನಾಗ್ತಾರೆ. ಆದ್ರೆ ಇಲ್ಲೊಬ್ಬ ರೈತರು ತಮ್ಮ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ ಕೊಠಡಿ ನಿರ್ಮಿಸಿದ್ದಾರೆ.
ರೈತರೊಬ್ಬರು ಇಂತಹ ಸಾರ್ಥಕತೆಯ ಕೆಲಸ ಮಾಡಿರೋದು ಗುಬ್ಬಿಯಲ್ಲಿ. ಗುಬ್ಬಿಯಲ್ಲಿ 60 ವರ್ಷದ ಇತಿಹಾಸವುಳ್ಳ ತಾಲ್ಲೂಕಿನ ಚಿಕ್ಕ ಚಂಗಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ದಿ ಪಡಿಸಿ, ಸುತ್ತಲಿನ 7 ಗ್ರಾಮದ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಸ್ಥಳೀಯ ರೈತ ಸಿ.ಕೆ.ಪ್ರಕಾಶ್ ತಮ್ಮ ವೈಯಕ್ತಿಕ ವೆಚ್ಚದಿಂದ ನೂತನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಜೂನ್ 5ಕ್ಕೆ ಇಲಾಖೆಗೆ ಹಸ್ತಾಂತರಿಸಲು, ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಚಿಕ್ಕ ಚಂಗಾವಿ ಸುತ್ತಲಿನ ಗ್ರಾಮಗಳಾದ ಬ್ಯಾಟಪ್ಪನಪಾಳ್ಯ, ಬುಕ್ಕಸಾಗರ, ಅಗ್ರಹಾರ ಹೀಗೆ ಅನೇಕ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಇರೋದು ಇದೊಂದೆ ಸರ್ಕಾರಿ ಶಾಲೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಕೊಠಡಿಯ ಕೊರತೆ ಕಂಡು ಸರ್ಕಾರಿ ಅನುದಾನವನ್ನು ಕಾಯದೆ, ತಾವೇ ವೈಯಕ್ತಿಕ ಆಸಕ್ತಿವಹಿಸಿ ಸಿ.ಕೆ.ಪ್ರಕಾಶ್ ಸುಮಾರು 15 ಲಕ್ಷ ರೂಗಳನ್ನು ವ್ಯಯ ಮಾಡಿ ,ಅಚ್ಚುಕಟ್ಟಾದ ನೂತನ ದೊಡ್ಡ ಕೊಠಡಿಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದಾರೆ. ಈಗಾಗಲೇ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಈ ಶಾಲೆಯನ್ನು ಉಳಿಸಿ, ಬೆಳೆಸುವ ಆಲೋಚನೆಯಲ್ಲಿ ಗ್ರಾಮಸ್ಥರನ್ನ ಸೇರಿಸಿಕೊಂಡು ಕೊಠಡಿ ನಿರ್ಮಿಸಿದ್ದಾರೆ.
ರೈತ ಮುಖಂಡ ಹಾಗೂ ಕೊಠಡಿಯ ದಾನಿ ಸಿ.ಕೆ.ಪ್ರಕಾಶ್ ಮಾತನಾಡಿ, ನಮ್ಮ ಪೂರ್ವಜರು ಸರ್ಕಾರಿ ಶಾಲೆ ಮಂಜೂರಾತಿಯಾದ ಸಮಯ ದಲ್ಲಿ ತಕ್ಷಣವೇ ಭೂದಾನ ನೀಡಿ, ಶಾಲೆಯನ್ನು ಊರಿಗೆ ಸಮೀಪದಲ್ಲೇ ನಿರ್ಮಿಸಲು ಅನುವು ಮಾಡಿದ್ದರು. ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಅಬ್ಬರಕ್ಕೆ ಸರ್ಕಾರಿ ಶಾಲೆಗಳು ಮುಚ್ಚುವ ಕೆಲಸ ನಡೆಯಿತು. ಈಗಾಗಲೇ ಎರಡು ಶಾಲೆಗಳು ಈ ಭಾಗದಲ್ಲಿ ಮುಚ್ಚಿದ್ದವು. ಉಳಿದ ಚಿಕ್ಕ ಚಂಗಾವಿ ಶಾಲೆಯು ಅದೇ ಪರಿಸ್ಥಿತಿಗೆ ತಲುಪುವ ಮುನ್ನ ನಮ್ಮ ಹಿರಿಯರ ಕನಸಿನ ಶಾಲೆಯನ್ನು ಉಳಿಸಲು ಅವಶ್ಯವಿದ್ದ, ಕೊಠಡಿ ಯನ್ನು ಖುದ್ದು ನಾನೇ ಹಣ ವ್ಯಯ ಮಾಡಿ. ಮುಂದೆ ನಿಂತು ಸುಸಜ್ಜಿತವಾಗಿ ನಿರ್ಮಿಸಿ ಇಲಾಖೆಗೆ ನೀಡುತ್ತಿದ್ದೇನೆ ಎಂದರು.
ಇನ್ನು ಜೂನ್ 5 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಲೋಕಾರ್ಪಣೆ ಗೊಳ್ಳಲಿದೆ. ನಂತರ 10.30 ಕ್ಕೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಮಾಜಿ ಶಾಸಕ ಮಸಾಲಾ ಜಯರಾಂ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಇತರರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದೇವರಾಜ್, ಮಾಜಿ ಅಧ್ಯಕ್ಷ ನಾರಾಯಣ, ಎಸ್ ಡಿಎಂಸಿ ಅಧ್ಯಕ್ಷ ಹರೀಶ್, ಸ್ಥಳೀಯರಾದ ವಿಜಯಕುಮಾರ್, ಶ್ರೀನಿವಾಸಗೌಡ, ಜೆಸಿಬಿ ಮೂರ್ತಿ, ದಿಲೀಪ್, ರಾಘು, ಪುನೀತ್, ಮಂಜಣ್ಣ, ದರ್ಶನ್ ಇತರರು ಇದ್ದರು.