ಪಾವಗಡ:
ಮೈಕ್ರೋ ಫೈನಾನ್ಸ್ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿಯೂ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗ್ತಿದೆ. ಪಾವಗಡ ತಹಶೀಲ್ದಾರ್ ವರದರಾಜ್ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಯಾರಿಗಾದರು ತೊಂದರೆ ಇದ್ದರೆ ತಕ್ಷಣವೇ ತಾಲೂಕ್ ದಂಡಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ತನ್ನಿ ಎಂದರು.
ಇತ್ತೀಚೆಗೆ ರಾಜ್ಯಾದ್ಯಂತ ಸಂಚಲನ ಮೂಡಿರುವ ಮೈಕ್ರೋ ಫೈನಾನ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ವರದರಾಜ್ ಹಾಗೂ ನಗರ ಸಿಪಿಐ ಸುರೇಶ್ ಹಾಗೂ ಗ್ರಾಮೀಣ ಸಿಪಿಐ ಗಿರೀಶ್ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.
ನಂತರ ತಹಶೀಲ್ದಾರ್ ವರದರಾಜ್ ಮಾತನಾಡಿ ಪಟ್ಟಣ ವ್ಯಾಪ್ತಿಯಲ್ಲಿರುವಂತಹ ಮೈಕ್ರೋಫೈನಾನ್ಸ್ ಕಂಪನಿಯ ಸಿಬ್ಬಂದಿಗಳನ್ನು ಕರೆಸಿ ಸಭೆ ನಡೆಸಿ ತಮ್ಮ ಫೈನಾನ್ಸ್ ಗಳಲ್ಲಿ ಸಾಲ ಪಡೆದಂತಹ ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು. ತೊಂದರೆಯಾಗದ ರೀತಿಯಲ್ಲಿ ತಮ್ಮ ಒಂದು ಫೈನಾನ್ಸ್ ಮಾನದಂಡಗಳ ಪ್ರಕಾರ ರಿಕವರಿ ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಗ್ರಾಹಕರಿಗೆ ತೊಂದರೆ ಆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ತಾಲೂಕಿನಲ್ಲಿ ಇಂತಹ ಯಾವುದೇ ಫೈನಾನ್ಸ್ ವಿಚಾರಗಳಾಗಿ ಸಮಸ್ಯೆ ಆಗಿಲ್ಲ, ಮುಂದೆ ಸಹ ಆಗಬಾರದು. ಫೈನಾನ್ಸ್ ಗಳಿಂದ ಯಾವುದೇ ತೊಂದರೆ ಆಗಿದ್ದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಗಮನಕ್ಕೆ ತನ್ನಿ ಎಂದು ತಿಳಿಸಿದರು.