Pavagada : ಗಬ್ಬೆದ್ದು ನಾರುತ್ತಿದೆ ಐತಿಹಾಸಿಕ ಕಲ್ಯಾಣಿ | ಅಧಿಕಾರಿಗಳ ವಿರುದ್ಧ ಜನಾಕ್ರೋಶ

PAVAGADA : ಪಾವಗಡ ಅಂದಾಕ್ಷಣ ನಮಗೆ ನೆನಪಿಗೆ ಬರೋದು ಬರದ ನಾಡು ಎಂದು. ಸರ್ಕಾರಗಳು ಎಷ್ಟೇ ಹಣ ಖರ್ಚು ಮಾಡಿದರೂ ಕೂಡ ಇನ್ನು ಅಭಿವೃದ್ಧಿ ಅನ್ನೋದು ಆಮೆಗತಿಯಲ್ಲಿ ಸಾಗುತ್ತಿದೆ ಅಂತಾರೆ ಜನರು. ಇತ್ತ ಭೂಗಳ್ಳರು ಹೆಚ್ಚಾಗುತ್ತಿದ್ದು, ರೈತರ ಜಮೀನು ಮತ್ತು ಸರ್ಕಾರದ ಖರಾಬು ಜಮೀನಿನನ್ನು ಕೊಳ್ಳೆ ಹೊಡೆಯುತ್ತಿರುವ ಆರೋಪ ಕೇಳಿಬರ್ತಿದೆ. ಜೊತೆಗೆ ಕೆರೆ, ದೇವಸ್ಥಾನದ ಜಾಗ, ಕಲ್ಯಾಣಿ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಸ್ವಚ್ಛತೆಯ ವಿಷಯ ಬಂದರೆ ಶೂನ್ಯ ಅಂತಿದ್ದಾರೆ ಸಾರ್ವಜನಿಕರು, ನಗರದಲ್ಲಿ ಇಂದಿಗೂ ಕೂಡ ಹಂದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಚರಂಡಿಗಳು ಗಬ್ಬೆದ್ದು ನಾರುತ್ತಿವೆ ಎನ್ನಲಾಗುತ್ತಿದೆ.  ಇದರ ನಡುವೆ ಐತಿಹಾಸಿಕ ಕಲ್ಯಾಣಿಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ಲಾಸ್ಟಿಕ್‌, ಕಸದಿಂದ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಕಲ್ಯಾಣಿಯಿಂದ ಬರುತ್ತಿರುವ ವಿಷಯುಕ್ತ ಗಾಳಿಯಿಂದಾಗಿ ಜನರಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆಯಂತೆ. ಆದರೆ ಅಧಿಕಾರಿಗಳು ಮಾತ್ರ ಕ್ಲೀನ್‌ ಮಾಡೋ ಮನಸ್ಸೆ ಮಾಡ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ತುಮಕೂರು-ಪಾವಗಡ ರಸ್ತೆಯಲ್ಲಿಯೇ ಇರುವ ಐತಿಹಾಸಿಕ ಕಲ್ಯಾಣಿ ಇಂದು ಪ್ಲಾಸ್ಟಿಕ್‌, ಕಸದಿಂದ ತುಂಬಿ ತುಳುಕುತ್ತಿದೆ. ಲಕ್ಷೀ ನರಸಿಂಹಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಐತಿಹಾಸಿಕ ಕಲ್ಯಾಣಿ ದುಸ್ಥಿತಿಯನ್ನು ನೋಡಿದರೆ ಅಧಿಕಾರಿಗಳ ನಿರ್ಲಕ್ಷ್ಯ ಗೊತ್ತಾಗುತ್ತೆ. ಪ್ರತಿವರ್ಷ ಕಣಿವೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಜಾತ್ರೆ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಅದರ ಜೊತೆಯಲ್ಲಿ ಪ್ರತಿ ವರ್ಷವೂ ಕೂಡ ಗಣೇಶ ಚತುರ್ಥಿಯ ದಿನ ಗಣೇಶ ಮೂರ್ತಿಗಳನ್ನು ಇದೇ ಕಲ್ಯಾಣಿಯಲ್ಲಿ ಬಿಡುತ್ತಾರೆ. ಆದರೆ ಅಂತಹ ಕೆರೆ ಇಂದು ಪ್ಲಾಸ್ಟಿಕ್‌ ನಿಂದ ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ.

ಇನ್ನು ಅಧಿಕಾರಿಗಳು ಗಣೇಶ ಹಬ್ಬ ಬಂದಾಗ ಮಾತ್ರ ಈ ಕಲ್ಯಾಣಿಯನ್ನು ಸ್ವಚ್ಛಗೊಳಿಸುತ್ತಾರಂತೆ. ಹಬ್ಬದ ದಿನ ಕಲ್ಯಾಣಿ ಸ್ವಚ್ಛಗೊಳಿಸುವುದರ ಜೊತೆಯಲ್ಲಿ ಹೊಸ ನೀರು ಕೂಡ ಬಿಡುತ್ತಾರಂತೆ. ಈ ಕಲ್ಯಾಣಿ ಪಕ್ಕದಲ್ಲಿಯೇ ಅರಣ್ಯ ಇಲಾಖೆ ಕಚೇರಿ ಇದ್ದು, ಅದರ ಮುಂಭಾಗ ಅರಣ್ಯ ಇಲಾಖೆಯ ಉದ್ಯಾನವನ ಸಹ ಇದೆ. ಪ್ರತಿದಿನ ಸಾವಿರಾರು ಸಾರ್ವಜನಿಕರು ಕಲ್ಯಾಣಿ ಮುಂಭಾಗ ಇರೋ ಉದ್ಯಾನವನಕ್ಕೆ ಬರುತ್ತಾರೆ. ಕಲ್ಯಾಣಿಯಲ್ಲಿ ತುಂಬಿರುವ ಪ್ಲಾಸ್ಟಿಕ್‌, ಕಸದಿಂದಾಗಿ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಜೊತೆಗೆ ಕಲ್ಯಾಣಿಯಿಂದ ಹೊರಬರುತ್ತಿರುವ ವಿಷಯುಕ್ತ ಗಾಳಿಯಿಂದಾಗಿ ವಾಕಿಂಗ್‌ ಬರುವ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ.

ಇನ್ನು ಕಲ್ಯಾಣಿ ಸ್ವಚ್ಛತೆ ಮಾಡಿ ಒಳ್ಳೆಯ ನೀರು ಬಿಟ್ಟು, ಅ ಭಾಗದಲ್ಲಿ ಬರುವಂತಹ ಅಯ್ಯಪ್ಪ ಸ್ವಾಮಿ ಭಕ್ತರು, ಇತರೆ ಭಕ್ತಾದಿಗಳು ಕೈಕಾಲು ಮುಖ ತೊಳೆಯಲು ವ್ಯವಸ್ಥೆ ಮಾಡಬಹುದಲ್ಲವೇ ಅಂತಾರೆ ಜನ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಬೇಕು. ವಿಷಯುಕ್ತ ಪ್ಲಾಸ್ಟಿಕ್‌ನಿಂದ ತುಂಬಿರುವ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಐತಿಹಾಸಿಕ ಕಲ್ಯಾಣಿಯೊಂದು ಕಣ್ಮರೆಯಾಗುವ ಸಾದ್ಯತೆ ಇದೆ. ವರ್ಷಕ್ಕೊಮ್ಮೆ ಕ್ಲೀನ್‌ ಮಾಡಿ ತಾವು ಏನೋ ಕೆಲಸ ಮಾಡುತ್ತಿದ್ದೇವೆ ಅಂತ ತೋರಿಸಿಕೊಳ್ಳೊ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡಬೇಕಿದೆ. ಆ ಮೂಲಕ ಐತಿಹಾಸಿಕ ಸ್ಥಳಗಳನ್ನು ಉಳಿಸಬೇಕಿದೆ.

Author:

...
Sushmitha N

Copy Editor

prajashakthi tv

share
No Reviews