ಪಾವಗಡ:
ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಉದ್ಘಟ್ಟೆ ರಸ್ತೆಯಲ್ಲಿರೋ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಫಸಲಿಗೆ ಬಂದ ಅಡಿಕೆ ಗಿಡಗಳು ಸೇರಿ ಇತರೆ ಗಿಡಗಳು ಹೊತ್ತಿ ಉರಿದಿದೆ. ಈರನಾಗಪ್ಪ ಎಂಬುವವರ ತೋಟದಲ್ಲಿ ಇಂದು ಮಧ್ಯಾಹ್ನ 3:00 ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 200ಕ್ಕೂ ಅಧಿಕ ಅಡಿಕೆ ಮರಗಳು ಹಾಗೂ 20ಕ್ಕೂ ಅಧಿಕ ತೆಂಗಿನ ಮರಗಳು ಸುಟ್ಟುಹೋಗಿವೆ. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲಿದ್ದ ಈರೇಗೌಡ ಅವರ ತೋಟಕ್ಕೂ ವ್ಯಾಪ್ತಿಸಿದ್ದು, 300ಕ್ಕೂ ಹೆಚ್ಚು ಅಡಿಕೆ ಮರಗಳು ಬೆಂಕಿಗೆ ಹೊತ್ತಿ ಉರಿದಿವೆ.
ಬೀಡಿಯಿಂದ ಒಣ ಹುಲ್ಲಿಗೆ ಬೆಂಕಿ ತಗುಲಿದ ಪರಿಣಾದ ಇಡೀ ತೋಟಕ್ಕೆ ಆವರಿಸಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸವೇ ಪಟ್ಟಿದ್ದಾರೆ. ಬೆಂಕಿ ನಂದಿಸುವಲ್ಲಿ ತಡವಾದ ಕಾರಣ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಬೆಳೆ ಕಳೆದುಕೊಂಡು ರೈತ ಕಣ್ಣೀರಾಕುತ್ತಿದ್ದಾರೆ. ಇನ್ನು ಪಾವಗಡ ತಾಲೂಕಿನಾದ್ಯಂತ ಇತ್ತೀಚೆಗೆ ಈ ರೀತಿಯ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗೆ ತಕ್ಷಣ ಸ್ಪಂದಿಸುವ ಸಾಧ್ಯತೆ ಕಡಿಮೆಯಾಗಿದೆ. ತಾಲೂಕಿನಲ್ಲಿರುವ ಒಂದೇ ಅಗ್ನಿಶಾಮಕ ವಾಹನದ ಮೂಲಕ ಎಲ್ಲೆಡೆ ತುರ್ತು ನೆರವು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆ ನಾಶವಾಗಿದ್ದಕ್ಕೆ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.