VIJAYANAGARA : ನರೇಗಾ ಕೆಲಸದ ವೇಳೆ ಕುಸಿದು ಬಿದ್ದು ಕಾರ್ಮಿಕ ಮೃತ್ಯು

VIJAYANAGARA NEWS : ವಿಜಯನಗರ ಜಿಲ್ಲೆಯ  ಹರಪನಹಳ್ಳಿ ತಾಲೂಕಿನ ಅರೇಮಜ್ಜಿಗೆರೆ ಗ್ರಾಮದಲ್ಲಿ ಇಂದು ನಡೆದ ದುರ್ಘಟನೆಯಲ್ಲಿ, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬ ಕೆಲಸ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಮೃತರನ್ನು ಡಿ. ಭರಮಪ್ಪ (65) ಎಂದು ಗುರುತಿಸಲಾಗಿದೆ. ಅವರು ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಅರೇಮಜ್ಜಿಗೆರೆ ಗ್ರಾಮದ ಹಳ್ಳವೊಂದರಲ್ಲಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (MGNREGA) ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದರು. ಬೆಳಗ್ಗೆ ಕೆಲಸ ಆರಂಭಿಸಿದ ಕೆಲವೇ ಸಮಯದಲ್ಲಿ ಅವರು ತೀವ್ರ ಅಸ್ವಸ್ಥತೆಗೆ ಒಳಗಾಗಿದ್ದು, ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲೇ ಕೊನೆಯುಸಿರೆಳೆದ ಭಾವನೆಯ ಹಿನ್ನೆಲೆಯಲ್ಲಿ, ಹೃದಯಾಘಾತವೇ ಇವರ ಸಾವಿಗೆ ಕಾರಣವಾಯಿತೆಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ತಾಲೂಕು ಪಂಚಾಯತ್ ಇಒ ವೈ.ಎಚ್. ಚಂದ್ರಶೇಖರ್, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ನೇತ್ರಾವತಿ ವೀರುಪಾಕ್ಷಪ್ಪ, ನೀಲಗುಂದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಪಿತ, ಪಿಡಿಓ ಅನಂದನಾಯ್ಕ್, ಮತ್ತು ಇಂಜಿನಿಯರ್ ಹರೀಶ್ ಆಗಮಿಸಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಮೃತ ಭರಮಪ್ಪ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.

Author:

...
Keerthana J

Copy Editor

prajashakthi tv

share
No Reviews