BANGALORE NEWS : ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ಇದೀಗ ಇಡೀ ದೇಶದಾದ್ಯಂತ ಭಾರೀ ಚರ್ಚೆಯಲ್ಲಿದೆ. ಈ ಪ್ರಕರಣದಲ್ಲಿ ಬೆಂಗಳೂರು ಕಮಿಷನರ್ ಬಿ.ದಯಾನಂದ್ ಸೇರಿದಂತೆ ಒಟ್ಟು ಐವರು ಪೊಲೀಸ್ ಅಧಿಕಾರಿಗಳನ್ನ ಅಮಾನತುಗೊಳಿಸಿ ಸರ್ಕಾರ ಕೈ ತೊಳೆದುಕೊಂಡಿತ್ತು. ಆದ್ರೆ ಸರ್ಕಾರದ ಈ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು. ದಯಾನಂದ್ ಅವರ ಅಮಾನತ್ತಿನ ಬಗ್ಗೆಯೂ ಆಕ್ಷೇಪಗಳು ಕೇಳಿಬಂದಿದ್ವು. ಸರ್ಕಾರ ತನ್ನ ತಪ್ಪನ್ನ ಮುಚ್ಚಿಕೊಳ್ಳಲು ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನ ಬಲಿಕೊಟ್ಟಿದ್ದು ಸರಿಯಲ್ಲ ಅನ್ನೋ ಮಾತುಗಳು ಕೇಳಿಬಂದಿದ್ವು. ಇದೀಗ ಬಿ.ದಯಾನಂದ್ ಅವರ ಪ್ರಾಮಾಣಿಕತೆಯನ್ನ ತೋರಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ದಯಾನಂದ್ ಕರ್ತವ್ಯ ನಿಷ್ಠೆಗೆ ಉಘೇ ಉಘೇ ಎನ್ನುತ್ತಿದ್ದಾರೆ.
ಹೌದು..ಫಿಟ್ನೆಸ್ ಸಲಹೆಗಾರ ರಘು ರಾಮಪ್ಪ ಅವರ ಜೊತೆ ಈ ಹಿಂದೆ ದಯಾನಂದ್ ಅವರು ಮಾತನಾಡಿರುವು ವಿಡಿಯೋ ತುಣುಕೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದೇ ವಿಡಿಯೋ ಬಿ.ದಯಾನಂದ್ ಅವರು ಅದೇಷ್ಟು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಅನ್ನೋದಕ್ಕೆ ಸಾಕ್ಷಿಯನ್ನ ಒದಗಿಸುತ್ತಿದೆ.
ಹಾಗಿದ್ರೆ ಈ ವಿಡಿಯೋದಲ್ಲಿ ಏನಿದೆ ಅನ್ನೋದನ್ನ ಕೂಡ ಹೇಳ್ತಾ ಹೋಗ್ತಿವಿ ನೋಡಿ. ರಘು ರಾಮಪ್ಪ ಅವರೊಂದಿಗೆ ಮಾತನಾಡುವ ವೇಳೆ ಬಿ.ದಯಾನಂದ್ ಅವರು ತಮ್ಮ ವೃತ್ತಿಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ತಮ್ಮ 30-35 ವರ್ಷಗಳ ಸುದೀರ್ಘ ಸೇವೆಯಲ್ಲಿ ಒಂದು ದಿನವೂ ಕೂಡ ರಜೆಯನ್ನೇ ಪಡೆದಿಲ್ಲ ಎಂದು ಖುದ್ದು ದಯಾನಂದ್ ಅವರೇ ಹೇಳಿಕೊಂಡಿದ್ದಾರೆ. ಕಳೆದ 30 ವರ್ಷದಲ್ಲಿ ತಾನು ಒಮ್ಮೆಯೂ ರಜೆ ಹಾಕಿಲ್ಲ. ಕುಟುಂಬದ ಕಾರ್ಯಕ್ರಮಗಳಿಗೆ ಹೋಗೋದಿಲ್ಲ. ಹೀಗಾಗಿ ಕುಟುಂಬಸ್ಥರು, ಸಂಬಂಧಿಕರು ಇತ್ತೀಚೆಗೆ ತನ್ನನ್ನ ಸಮಾರಂಭಗಳಿಗೆ ಕರೆಯೋದನ್ನೇ ಬಿಟ್ಟಿದ್ದಾರೆ. ನನ್ನ ಎಂಗೇಜ್ ಮೆಂಟ್ ನಿಶ್ಚಯವಾಗಿದ್ದ ದಿನ ಮಂಗಳೂರಲ್ಲಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ನಿಶ್ಚಿತಾರ್ಥ ನಿಗದಿಯಾಗಿದ್ದ ದಿನ ನಾನು ಬೆಂಗಳೂರಿಗೆ ಬರುವುದಕ್ಕೆ ಆಗಿರಲಿಲ್ಲ. ಹೀಗಾಗಿ ನಿಶ್ಚಿತಾರ್ಥವನ್ನೇ ಒಂದು ದಿನ ಮುಂದೂಡಿದ್ದೆ. ಅಲ್ಲದೇ ನನ್ನಿಬ್ಬ ಮಕ್ಕಳ ನಾಮಕರಣಕ್ಕೂ ನನಗೆ ಹೋಗೋದಕ್ಕೆ ಆಗಿಲ್ಲ ಅಂತಾ ಈ ವಿಡಿಯೋದಲ್ಲಿ ಬಿ.ದಯಾನಂದ್ ಅವರು ಹೇಳಿಕೊಂಡಿದ್ದಾರೆ.
ಇದೀಗ ಸರ್ಕಾರ ದಯಾನಂದ್ ಅವರನ್ನ ಸಸ್ಪೆಂಡ್ ಮಾಡಿರೋ ಹಿನ್ನೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನೆಟ್ಟಿಗರು ಈ ವಿಡಿಯೋವನ್ನ ಸಿಕ್ಕಾಪಟ್ಟೆ ಶೇರ್ ಕೂಡ ಮಾಡ್ತಿದ್ದು, ಸಾವಿರಾರು ಕಾಮೆಂಟ್ಗಳು ಕೂಡ ಬರ್ತಿವೆ. ಇಂತಹ ದಕ್ಷ ಅಧಿಕಾರಿಯನ್ನ ಸರ್ಕಾರ ಹೀಗೆ ನಡೆಸಿಕೊಂಡಿರುವುದು ಸರಿಯಿಲ್ಲ ಎಂದು ಅಸಮಾಧಾನ ಹೊರಹಾಕ್ತಿದ್ದಾರೆ.