BANGALORE: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆ ಚುರುಕುಗೊಳಿಸಿದ್ದು, ಇಂದು ಬೆಳಗಿನ ಜಾವವೇ ಬಳ್ಳಾರಿಯ ಪ್ರಮುಖ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ನಡೆಸಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರೂಪಾಯಿ ಹಣ ದುರ್ಬಳಕೆಯಾಗಿರುವ ಆರೋಪದಡಿ ಇ.ಡಿ. ಅಧಿಕಾರಿಗಳು ಬಳ್ಳಾರಿ ಸಂಸದ ಇ. ತುಕಾರಂ ಹಾಗೂ ಕೆಲವು ಕಾಂಗ್ರೆಸ್ ಶಾಸಕರ ನಿವಾಸ ಮತ್ತು ಕಚೇರಿಗಳ ಮೇಲೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ಹಾಗೂ ಆರ್ಥಿಕ ವ್ಯವಹಾರಗಳ ಕುರಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದಾಳಿ ವೇಳೆ ಬ್ಯಾಂಕ್ ಲೆಕ್ಕಗಳು, ಆಸ್ತಿ ದಾಖಲೆಗಳು, ಹಣ ವರ್ಗಾವಣೆ ದಾಖಲೆಗಳು ಸೇರಿದಂತೆ ಹಲವಾರು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ತುಕಾರಂ ಪಿಎ ಆಗಿರುವ ಗೋರ್ವಧನ್ ಮನೆ ಮೇಲೆಯೂ ದಾಳಿ ಮಾಡಿದ್ದು, ಶಾಸಕರ ಭವನದಲ್ಲಿರುವ ನಾಗೇಂದ್ರ ಅವರ ಕೊಠಡಿ ಮೇಲೆ ದಾಳಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿಆರ್ಪಿಎಫ್ ಪೊಲೀಸರ ಭದ್ರತೆಗೆ ನಿಯೋಜಿಸಲಾಗಿದೆ.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿ ಶಾಸಕ ಜೆಎನ್ ಗಣೇಶ್ ನಿವಾಸ, ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಅವರ ಸ್ವಗ್ರಾಮ ನರಸಿಂಹಗಿರಿ ಮನೆ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.