GUBBI : ತೊರೆಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಶ್ರೀ ಚಂದ್ರಶೇಖರ ಸ್ವಾಮೀಜಿ ನೇಮಕ

GUBBI NEWS : ಗುಬ್ಬಿಯ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಆಟವಿ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಗುಬ್ಬಿಯ ತೊರೆಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಶ್ರೀ ಚಂದ್ರಶೇಖರ ದೇಶೀ ಕೇಂದ್ರ ಸ್ವಾಮೀಜಿಗಳನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೇಮಕ ಮಾಡಲಾಯಿತು.

ಬೆಳಿಗ್ಗೆ ವಿವಿಧ ಧಾರ್ಮಿಕ ಕೈಂಕರ್ಯ ವಿಧಿವತ್ತಾಗಿ ನಡೆಸಿ,  ಚಿಕ್ಕ ತೊಟ್ಲುಕೆರೆ ಮಠದ ಶ್ರೀ ಅಟವಿ ಶಿವಲಿಂಗ ಸ್ವಾಮಿಗಳ ಮೂಲಕ ದೀಕ್ಷೆ ಪಡೆದು, ಉತ್ತರಾಧಿಕಾರಿ ನೇಮಕದ ಎಲ್ಲಾ ಪ್ರಕ್ರಿಯೆಯನ್ನು ವಿವಿಧ ಮಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಸಲಾಯಿತು. 

ಶ್ರೀ ಅಟವಿ ಶಿವಲಿಂಗ ಸ್ವಾಮೀಜಿಗಳು ಮಾತನಾಡಿ, ಜಿಲ್ಲೆಯಲ್ಲಿನ ಧಾರ್ಮಿಕ ಪರಂಪರೆಯುಳ್ಳ ಕೆಲ ಮಠಗಳ ಪೈಕಿ ಆಟವಿ ಶ್ರೀಗಳಿಂದ ಸ್ಥಾಪಿತವಾದ ಗುಬ್ಬಿಯ ತೊರೆಮಠ ಗುರು ಪರಂಪರೆ ಉಳಿಸಿಕೊಂಡು ಬಂದಿದೆ. ಶ್ರೀ ರಾಜಶೇಖರ ಶ್ರೀಗಳು ಲಿಂಗೈಕ್ಯರಾದ ಬಳಿಕ ತೊರೆಮಠದ ಚಟುವಟಿಕೆಗಳು ಕಳೆದ ಒಂದುವರೆ ವರ್ಷಗಳಿಂದ ಕುಂಠಿತವಾಗಿತ್ತು. ಮಠದ ಅಭಿವೃದ್ದಿಗೆ ಮಠದ ಭಕ್ತರು ಹಾಗೂ ಹದಿನೆಂಟು ಕೋಮಿನ ಜನರು ಸಭೆ ನಡೆಸಿ ಉತ್ತರಾಧಿಕಾರಿಗಳ ನೇಮಕಕ್ಕೆ ನಿರ್ಧರಿಸಿ, ಜನವರಿ 15ರ ನಂತರ ಉತ್ತರಾಯಣ ಕಾಲದಲ್ಲಿ ಶ್ರೀ ಚಂದ್ರಶೇಖರ ದೇಶೀ ಕೇಂದ್ರ ಸ್ವಾಮೀಜಿಗಳ ಆಯ್ಕೆ ಮಾಡಲಾಯಿತು. ಆರ್ಥಿಕ ಕೊರತೆ ಹಿನ್ನಲೆ ಕಾರ್ಯಕ್ರಮಕ್ಕೆ ನೂತನ ಶ್ರೀಗಳ ಎರಡು ದಿನದ ಭಿಕ್ಷಾಟನೆ ಮೂಲಕ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಗುಳೇದಗುಡ್ಡ ಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಆಲೂರು ಮಠದ ಶ್ರೀ ಶಿವಬಸವ ಸ್ವಾಮೀಜಿ, ಬೆಳ್ಳಾವಿ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿ, ಗುಡ್ಡದ ಅನ್ವೇರಿ ಮಠದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ, ಮುಂಡರಗಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಂಕಲಗಿ ಮಠದ ಶ್ರೀ ಅಮರ ಸಿದ್ದೇಶ್ವರ ಸ್ವಾಮೀಜಿ, ಶಿವಗಂಗೆ ಪೀಠದ ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿ, ತೆವಡೇಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಲ್ಲಾ ರಾಜಕೀಯ ಮುಖಂಡರು, ಹದಿನೆಂಟು ಕೋಮಿನ ಮುಖಂಡರು, ಹಾಜರಿದ್ರು.

Author:

...
Keerthana J

Copy Editor

prajashakthi tv

share
No Reviews