NELAMANGALA: ಯುವತಿ ವಿಚಾರಕ್ಕೆ ನಡೆದ ಗಲಾಟೆಯು ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬಳಿ ನಡೆದಿದೆ. ಈ ಘಟನೆಯಲ್ಲಿ ಯುವಕ ದರ್ಶನ್ (24) ಎಂಬಾತ ಕೊಲೆಯಾಗಿದ್ದು, ಆರೋಪಿ ವೇಣುಗೋಪಾಲ್ ಈ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ.
ದರ್ಶನ್ ಮತ್ತು ವೇಣುಗೋಪಾಲ್ ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗ್ತಿದ್ದು, ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಆದರೆ ನಿನ್ನೆ ರಾತ್ರಿ ದರ್ಶನ್ ಅನ್ನು ಪಾರ್ಟಿಗೆ ಕರೆದಿದ್ದು, ಪಾರ್ಟಿ ಬಳಿಕ ಇಬ್ಬರ ಮಧ್ಯೆ ತೀವ್ರವಾದ ವಾಗ್ವಾದ ನಡೆದಿದ್ದು, ಬಳಿಕ ವೇಣುಗೋಪಾಲ್ ದರ್ಶನ್ನನ್ನು ಮನಸೋಹಿಚ್ಚೆ ಭೀಕರವಾಗಿ ಕೊಂದು, ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಆರೋಪಿ ಬಲೆ ಬೀಸಿದ್ದಾರೆ