CHIKKANAYAKANAHALLLI NEWS : ರಾಷ್ಟ್ರೀಯ ಹೆದ್ದಾರಿ ಅಂತ ಅಂದ್ರೆ ಅಲ್ಲಿ ವೇಗದ ಸಂಚಾರವಿರುತ್ತೆ. ಜೊತೆಗೆ ನಿಗಧಿತ ಸ್ಥಳಗಳಲ್ಲಿ ಸಿಗುವ ಗ್ರಾಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಸ್ತೆಗೆ ಹಂಪ್ಸ್ಗಳನ್ನು ಹಾಕುತ್ತಾರೆ. ಕಾರಣ ಆ ಗ್ರಾಮದಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು, ಶಾಲಾ ಕಾಲೇಜು ಮಕ್ಕಳ ರಕ್ಷಣೆಯ ದೃಷ್ಠಿಯಿಂದ. ಇನ್ನು ಆ ಗ್ರಾಮಕ್ಕೆ ಎಂಟ್ರಿ ಕೊಡುವ ಗಾಡಿಗಳು ತಮ್ಮ ವೇಗವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಿ ಮುಂದೆ ಸಂಚರಿಸುತ್ತವೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತೆ. ಆದ್ರೆ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ರಾಷ್ಟ್ರೀಯ ಹೆದ್ದಾರಿ-234ರಲ್ಲಿ ಯಾವುದೇ ಸುರಕ್ಷಿತ ಕ್ರಮವಿಲ್ಲದೆ, ವಾಹನ ಸವಾರರು, ಪಾದಾಚಾರಿಗಳು ಜೀವಭಯದಲ್ಲಿಯೇ ಓಡಾಡುವಂತಾಗಿದೆ.
ಹೊಯ್ಸಳಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಚಿಕ್ಕಗಾಡಿಗಳಿಂದ ಹಿಡಿದು ದೊಡ್ಡ ದೊಡ್ಡ ಗಾಡಿಗಳು ಸಂಚರಿಸುತ್ತವೆ. ಆದ್ರೆ ಈ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು, ವಾಹನ ಸವಾರರು, ವಿದ್ಯಾರ್ಥಿಗಳು ಜೀವ ಭಯದಲ್ಲಿಯೇ ಸಂಚರಿಸುತ್ತಿದ್ದಾರೆ. ಪ್ರತಿದಿನ ಸಾವಿರಾರು ಲಾರಿ, ಟಿಪ್ಪರ್, ಸರಕು ಸಾಗಣೆ ವಾಹನಗಳು, ಬೈಕ್, ಆಟೊ, ಬಸ್ಸುಗಳು, ಪ್ರವಾಸಿ ಮತ್ತು ಸ್ಥಳೀಯ ವಾಹನಗಳಿಂದಾಗಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿರುತ್ತದೆ. ಹೊಯ್ಸಳಕಟ್ಟೆಯ ಹೆದ್ದಾರಿಯಲ್ಲಿ ಉತ್ತಮವಾದ ರಸ್ತೆ ಇದೆ. ಆದ್ರೆ ಹಮ್ಸ್ಗಳಿಲ್ಲ. ಅತ್ತ ಪಾದಚಾರಿ ಮಾರ್ಗವಿಲ್ಲ. ಮತ್ತೊಂದು ಕಡೆ ಬೀದಿದೀಪಗಳು ಸರಿಯಿಲ್ಲ. ಈ ಕಾರಣಕ್ಕೆ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ ಅಂತ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಹೆದ್ದಾರಿಯಲ್ಲಿ ಹಂಪ್ಸ್, ಬ್ಯಾರಿಕೇಡ್ಗಳಿಲ್ಲದೆ ಹಿಂದೆ ಹಲವಾರು ಬಾರಿ ಅಪಘಾತವಾಗಿದೆ. ರಸ್ತೆ ದಾಟುವ ವೇಳೆ ಹೊಯ್ಸಳ ಗ್ರಾಮದ ಜನರಷ್ಟೆ ಅಲ್ಲದೆ ಹಲವು ಗ್ರಾಮದವರು ಸಾವನ್ನಪ್ಪಿದ್ದಾರೆ. ಇದೇ ಸ್ಥಳದಿಂದ ಮತ್ತೊಂದು ಗ್ರಾಮ, ಶಾಲಾ-ಕಾಲೇಜಿಗೆ ಹೋಗಲು ಮಕ್ಕಳು, ಹಿರಿಯರು ಬಸ್ಸಿಗಾಗಿ ನಿಲ್ಲುತ್ತಾರೆ, ಪಾದಚಾರಿಮಾರ್ಗವಿಲ್ಲದೆ ನಡುರಸ್ತೆಯಲ್ಲಿಯೇ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುವ ವೇಗದ ಗಾಡಿಗಳಿಗೆ ಸಿಲುಕಿ ಸಾವನ್ನಪ್ಪುವ ಸಾದ್ಯತೆ ಹೆಚ್ಚಾಗಿದೆ ಅಂತಾರೇ ಗ್ರಾಮಸ್ಥರು.
ಇನ್ನು ಈ ಹೊಯ್ಸಳಕಟ್ಟೆಯ ಜನರಿಗೆ ಹಣ ಡ್ರಾಮ ಮಾಡಲು ಎಟಿಎಂಗಳಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಬ್ಯಾಂಕ್ ಇದ್ದರು ಕೂಡ ಇಲ್ಲಿ ಎಟಿಎಂ ಇಲ್ಲ. ಹೀಗಾಗಿ ಜನರು ಹಣ ಪಡೆಯಲು ಪರದಾಡುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ನಮ್ಮ ಹೊಯ್ಸಳಕಟ್ಟೆಗೆ ಒಂದು ATM ಅಳವಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಅದೇನೇ ಇರಲಿ ಅದು ಹೇಳಿಕೇಳಿ ರಾಷ್ಟ್ರೀಯ ಹೆದ್ದಾರಿ. ಅಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ ಆ ಹೊಯ್ಸಳಕಟ್ಟೆಯ ಗ್ರಾಮದ ಜನರಿಗೆ ಹೆದ್ದಾರಿ ಪ್ರಾಧಿಕಾರ ಸೂಕ್ತ ಸುರಕ್ಷಿತ ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮಸ್ಥರ ನೋವಿಗೆ ಸ್ಪಂದಿಸಬೇಕಿದೆ.