ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಆಕಾಂಕ್ಷ ಎಂಬ ಯುವತಿ ಪಂಜಾಬ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವಂತಹ ಘಟನೆ ನೆನ್ನೆ ಸಂಜೆ ನಡೆದಿದೆ. ಆಕಾಂಕ್ಷನ ಶವ ಪಂಜಾಬಿನ ಫಗ್ವಾಡಾ ಬಳಿ ಪತ್ತೆಯಾಗಿದ್ದು, ಈ ಸುದ್ದಿ ಕುಟುಂಬದ ಮೇಲೆ ಆಘಾತ ತಂದಿದೆ.
ಧರ್ಮಸ್ಥಳದ ಸುರೇಂದ್ರ ಮತ್ತು ಸಿಂದೂ ದೇವಿ ದಂಪತಿಯ ಮಗಳಾದ ಆಕಾಂಕ್ಷ, ಪಂಜಾಬಿನ ಫಗ್ವಾಡಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಆಕಾಂಕ್ಷ, 6 ತಿಂಗಳ ಹಿಂದೆ ದೆಹಲಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಇತ್ತೀಚೆಗಷ್ಟೆ ಜಪಾನಿನಲ್ಲಿ ಆಕಾಂಕ್ಷಗೆ ಉದ್ಯೋಗ ಸಿಕ್ಕಿದ್ದು, ಶೈಕ್ಷಣಿಕ ಪ್ರಮಾಣಪತ್ರ ಪಡೆದುಕೊಳ್ಳಲು ಪಂಜಾಬ್ಗೆ ತೆರಳಿದ್ದರು.
ಅಲ್ಲಿ ಪ್ರಮಾಣ ಪತ್ರ ಪಡೆದ ನಂತರ ಆಕಾಂಕ್ಷ ತಮ್ಮ ಕುಟುಂಬಕ್ಕೆ ಕರೆ ಮಾಡಿ ಮಾತನಾಡಿದ್ದರು. ಆದರೆ ಅದೇ ಕೊನೆಯ ಕರೆ ಅನ್ನುವುದು ಯಾರಿಗೂ ತಿಳಿಯಿರಲಿಲ್ಲ. ಬಳಿಕ ಆಕಾಂಕ್ಷನ ಶವ ನಿಗೂಢ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ನಿಗೂಢ ಸಾವು ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಶಂಕಾಸ್ಪದ ಮರಣವಾಗಿ ಪ್ರಕರಣ ದಾಖಲಾಗಿದೆ.
ಇನ್ನು ಪ್ರಕರಣ ಪಂಜಾಬ್ನ ಜಲಂದರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನೆನ್ನೆ ರಾತ್ರಿಯೇ ಮನೆ ಮಂದಿ ಪಂಜಾಬ್ಗೆ ತೆರಳಿದ್ದಾರೆ. ಆಕಾಂಕ್ಷ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ ಎಂದು ವರದಿಯಾಗಿದೆ. ಆದರೆ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ತಂದೆ ಆರೋಪ ಮಾಡುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.