HASSAN NEWS : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ನೆನ್ನೆ ಸಂಜೆ ತಾಯಿ ಆನೆ ಮತ್ತು ಮರಿ ಆನೆ ವಿದ್ಯುತ್ ತಂತಿಗೆ ತಾಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ದುರ್ಘಟನೆ ಕೆಸಗುಲಿ ಗ್ರಾಮದ ಬಳಿಯಿರುವ ಗುಡ್ಡಬೆಟ್ಟ ಎಬಿಸಿ ಎಸ್ಟೇಟ್ ಸಮೀಪದಲ್ಲಿ ಸಂಭವಿಸಿದೆ.
ರಂಗಶೆಟ್ಟಿ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಘಟನೆ ಸಂಭವಿಸಿದ್ದು, ವಿದ್ಯುತ್ ತಂತಿಗೆ ಏನಾದರೂ ಸಮಸ್ಯೆ ಇರಬಹುದೆಂದು ಶಂಕಿಸಿ ತೋಟದ ಕಾರ್ಮಿಕರು ಇಂದು ಬೆಳಗ್ಗೆ ತೋಟವನ್ನು ಪರಿಶೀಲಿಸಲು ಹೋಗಿದ್ದರು. ಈ ವೇಳೆ ಇಬ್ಬರೂ ಆನೆಗಳು ಸತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನು ಕಾರ್ಮಿಕರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆನೆಗಳು ತೋಟದ ಗಡಿಯಲ್ಲಿರುವ ವಿದ್ಯುತ್ ತಂತಿಗೆ ತಾಗಿಕೊಂಡು ಸಾವನ್ನಪ್ಪಿರುವುದು ಖಚಿತವಾಗಿದೆ.
ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಹಾಗೂ ಈ ರೀತಿಯ ಘಟನೆಗಳು ಪುನರಾವರ್ತನೆಗೊಳ್ಳದಂತೆ ತಕ್ಷಣ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಸ್ಥಳದಲ್ಲಿ ಕಣ್ಗಾವಲು ಮುಂದುವರೆದಿದೆ.