ಮಂಡ್ಯ:
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನ ಸಮುದ್ರದ ಬಳಿಯ ಶಿಂಷಾ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಸುಟ್ಟು ಭಸ್ಮವಾಗಿದೆ.
ಶಿಂಷಾ ಅರಣ್ಯ ಪ್ರದೇಶದ ಸೊಪ್ಪಿನ ಗುಡ್ಡೆ ಪ್ರದೇಶದಲ್ಲಿ ನೆನ್ನೆ ಸಂಜೆ ವೇಳೆಯಲ್ಲಿ ಯಾರೋ ಕಿಡಿಗೇಡಿಗಳು ಬಂದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ನೂರಾರು ಎಕರೆಯ ಅರಣ್ಯ ಪ್ರದೇಶದಲ್ಲಿ ಇರುವ ಅಪಾರ ಪ್ರಮಾಣದ ಮರಗಿಡಗಳು ಮತ್ತು ಈ ಪ್ರದೇಶದಲ್ಲಿ ಇದ್ದಂತಹ ಕೆಲವು ಪಕ್ಷಿಗಳು ಸುಟ್ಟು ಭಸ್ಮವಾಗಿದೆ. ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇನ್ನು ಬೆಂಕಿ ಇಟ್ಟ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.