MADHUGIRI : ಮಧುಗಿರಿ ಕ್ಷೇತ್ರವನ್ನು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುತ್ತಿದ್ದು, ಇದಕ್ಕೆ ನಮ್ಮ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ವಿ.ಪ ಸದಸ್ಯ ಆರ್.ರಾಜೇಂದ್ರ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಕಸಬಾ ಹೋಬಳಿಯ ಮರುವೇಕೆರೆ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ ವೆಚ್ಷದಲ್ಲಿ ಪಶು ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮದ ದಾನಿಗಳು 10 ಗುಂಟೆ ಜಾಗ ದಾನ ಮಾಡಿದಕ್ಕೆ ಇಂದು ಪಶು ಆಸ್ಪತ್ರೆ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಬಹಳಷ್ಟು ಜನಗಳಿಗೆ ಇಂತಹ ವ್ಯಕ್ತಿಗಳು ಪಾಠವಾಗಬೇಕು. ಒಂದು ಅಡಿ ಜಾಗವನ್ನು ನೀಡದೆ ಇರುವ ಕಾಲದಲ್ಲಿ ನಾಗರಾಜ್ ಶೆಟ್ಟಿ ಹಾಗೂ ನಾರಾಯಣ್ ಶೆಟ್ಟಿ ಅವರು 10 ಗುಂಟೆ ಜಾಗ ನೀಡಿದ್ದಾರೆ. 800 ಕೋಟಿ ರೂ ವೆಚ್ಚದಲ್ಲಿ ಒಂದು ವರ್ಷದೊಳಗಾಗಿ ಪಟ್ಟಣ ಹಾಗೂ ಗ್ರಾಮೀಣಾ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಜೂ.28ಕ್ಕೆ ಸಿಎಂ ಸಿದ್ದರಾಮಯ್ಯ ಬಂದು ಗುದ್ದಲಿ ಪೂಜೆ ನೆರವೇರಿಸುವರು ಎಂದರು.
ಪಶು ಇಲಾಖೆ ಉಪ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ ಮಾತನಾಡಿ, ಈ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲು ಸಹಕಾರಿ ಸಚಿವರು ಮತ್ತು ನಿವೇಶನ ದಾನಿಗಳಾದ ನಾರಯಣ ಶೆಟ್ಟಿ ಕುಟುಂಬವೇ ಕಾರಣ. ಬೆಂಗಳೂರಿನ ಪಶು ಆಸ್ಪತ್ರೆಯನ್ನು ಇಲ್ಲಿ ವರ್ಗಾವಣೆ ಮಾಡಿದ್ದು, ದಾನಿಗಳು ನೀಡಿದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಗೋಟೂರು ಶಿವಪ್ಪ, ತಹಶಿಲ್ದಾರ್ ಶೀರಾನ್ ತಾಜ್, ದಾನಿಗಳಾದ ನಾರಾಯಣ್ ಶೆಟ್ಟಿ, ನಾಗರಾಜ್ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಮಾಜಿ ಜಿ.ಜಿಪಂ ಸದಸ್ಯ ಬಿ.ವಿ ನಾಗರಾಜಪ್ಪ, ಕೆ.ಎಂಎಫ್ ನಿರ್ದೇಶಕ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿ ನಾರಾಯಣ ರೆಡ್ಡಿ, ಗ್ರಾಪಂ ಅಧ್ಯಕ್ಷ ನಾಗಭೂಷಣ, ಪಿಡಿಓ ರವಿಚಂದ್ರನ್ ಮುಖಂಡರು ಹಾಜರಿದ್ದರು.