ಬೆಂಗಳೂರು : ಸರ್ಕಾರಿ ನೌಕರರಿಗೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ. ನನ್ನ ಇಲಾಖೆಯಲ್ಲಿ ಇಂತಹದ್ದನ್ನು ಸಹಿಸೋಕೆ ಸಾಧ್ಯವಿಲ್ಲ,” ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಶಾಲಾ ಕೊಠಡಿಗಾಗಿ ಪ್ರತಿಭಟನೆ ಮಾಡಿದ ಶಿಕ್ಷಕನನ್ನು ಅಮಾನತು ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, “ಸರ್ಕಾರಿ ನೌಕರರಿಗೆ ಸ್ಪಷ್ಟವಾದ ಕಾನೂನು ನಿಯಮಗಳಿವೆ. ಯಾವುದೇ ಸಮಸ್ಯೆ ಇದ್ದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಾದ ಬಿಇಓ (BEO), ಡಿಡಿಪಿಐ (DDPI) ಗಳ ಗಮನಕ್ಕೆ ತರಬೇಕು. ಏಕಾಏಕಿ ಸಾರ್ವಜನಿಕವಾಗಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಇಲ್ಲ,” ಎಂದರು.
ನಾವು ಶಾಲೆಗೆ ಕಟ್ಟಡವನ್ನು ಒದಗಿಸಿದ್ದೇವೆ ಎಂಬುದು ಅವರಿಗೆ ತಿಳಿದಿದೆ. ಗೊತ್ತಿದ್ದರೂ ಪ್ರತಿಭಟನೆ ಮಾಡಿರುವುದು ಸರಿಯಲ್ಲ. ಹೀಗಾಗಿ ಬಿಇಓ ಅವರು ಶಿಕ್ಷಕನ ಅಮಾನತಿನ ಆದೇಶ ನೀಡಿದ್ದಾರೆ. ಸರ್ಕಾರಿ ನೌಕರರು ಇತಿಮಿತಿಯಲ್ಲಿರಬೇಕು. ಇಂತಹ ವಿಷಯಕ್ಕೆ ಸಾರ್ವಜನಿಕವಾಗಿ ಪ್ರತಿಭಟನೆ ಮಾಡುವುದು ತಪ್ಪು. ಸಚಿವರ ಪ್ರಕಾರ, ಈಗಿನ ಅಮಾನತು ವಾಪಸ್ ಪಡೆಯಬೇಕೆಂದು ಹಲವರು ಸಲಹೆ ನೀಡಿದ್ದಾರೆ. “ಈ ಸಂಬಂಧ ಕಡತವೊಂದನ್ನು ನನಗೆ ತಂದಿದ್ದಾರೆ. ನಾನು ಅದರ ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ,” ಎಂದು ಅವರು ಮಾಹಿತಿ ನೀಡಿದ್ದಾರೆ.