ಕುಣಿಗಲ್:
ಐಟಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ಕುಣಿಗಲ್ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕುಣಿಗಲ್ ದೊಡ್ಡಕೆರೆಯಲ್ಲಿ ಇದೀಗ ಅಗ್ನಿಶಾಮಕ ದಳದಿಂದ ಯುವತಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಸುಮಾ ಎಂಬಾಕೆ ಕಣ್ಮರೆಯಾಗಿರುವ ಯುವತಿ. ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ಮೂಲದ ಸುಮಾ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು. ಆದರೆ ನಿನ್ನೆ ಬೆಂಗಳೂರಿನಿಂದ ಕುಣಿಗಲ್ಗೆ ವಾಪಸ್ ಬಂದಿದ್ದಾಳೆ ಎನ್ನಲಾಗಿದೆ. ಆದರೆ ಮನೆಗೆ ಮಾತ್ರ ಹೋಗಿಲ್ಲ. ಇನ್ನು ಕುಣಿಗಲ್ನ ದೊಡ್ಡಕೆರೆಯ ಬಳಿ ಸುಮಾಳ ಬ್ಯಾಗ್, ಮೊಬೈಲ್, ಚಪ್ಪಲಿ ಮತ್ತು ಬೆಂಗಳೂರಿನಿಂದ ಕುಣಿಗಲ್ಗೆ ಬಸ್ನಲ್ಲಿ ಪ್ರಯಾಣಿಸಿದ್ದ ಬಸ್ ಟಿಕೆಟ್ ಕೂಡ ಪತ್ತೆಯಾಗಿದೆ. ಹೀಗಾಗಿ ಕುಣಿಗಲ್ ಕೆರೆಗೆ ಹಾರಿ ಸುಮಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಸುಮಾಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಇನ್ನು ಅಗ್ನಿಶಾಮಕ ದಳ ಸಿಬ್ಬಂದಿಗೆ ಕುಣಿಗಲ್ ಶಾಸಕ ಡಾ.ರಂಗನಾಥ್ ಕೂಡ ಸಾಥ್ ನೀಡಿದ್ದಾರೆ. ಖುದ್ದು ಅಗ್ನಿಶಾಮಕ ದಳದೊಂದಿಗೆ ರಂಗನಾಥ್ ಕೆರೆಗೆ ಇಳಿದಿದ್ದಾರೆ. ಲೈಫ್ ಜಾಕೆಟ್ ಧರಿಸಿ ಯುವತಿಗಾಗಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಯುವತಿಗಾಗಿ ಶೋಧಕಾರ್ಯ ಮುಂದುವರೆದಿದೆ.