ಕೊರಟಗೆರೆ:
ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ತೀತಾ ಗ್ರಾಮ ಪಂಚಾಯ್ತಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಿಡಿಗೇಡಿಗಳು ಬೆಂಕಿಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ಘನತ್ಯಾಜ್ಯ ಘಟಕದಲ್ಲಿದ್ದ ಮತ್ತು ಹೊರಗಡೆ ಶೇಖರಣೆ ಆಗಿದ್ದ ಕಸವು ಧಗಧಗನೆ ಹೊತ್ತಿ ಉರಿದಿದೆ. ಅಲ್ಲದೇ ತ್ಯಾಜ್ಯ ಘಟಕದ ಮೇಲಿದ್ದ ಶೀಟ್ಗಳು ಬೆಂಕಿಗಾಹುತಿಯಾಗಿದ್ದು, ಘಟಕದ ಗೋಡೆಗಳು ಬಿರುಕು ಬಿಟ್ಟಿವೆ.
ಕಿಡಿಗೇಡಿಗಳ ಕೃತ್ಯದಿಂದಾಗಿ ಘನತ್ಯಾಜ್ಯ ಘಟಕ ಹೊತ್ತಿ ಉರಿದಿದ್ದು, ಘನತ್ಯಾಜ್ಯ ಘಟಕದ ಸುತ್ತ ದಟ್ಟ ಹೊಗೆ ಎದ್ದಿದ್ದು, ಸ್ಥಳೀಯರು ಭಯಭೀತಿಗೊಂಡಿದ್ದರು. ಬೆಂಕಿ ದುರಂತದಿಂದ ಘನತ್ಯಾಜ್ಯವು ಸಂಪೂರ್ಣ ಸುಟ್ಟ ಭಸ್ಮವಾಗಿದೆ. ಇನ್ನು ಬೆಂಕಿಯ ಉಗುಳಿಗೆ ಅಕ್ಕಪಕ್ಕದ ಗಿಡಮರಗಳಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದ ಹಕ್ಕಿ ಪಕ್ಷಿಗಳು ಹಾರಿ ಹೋಗಿದ್ದು, ಪುಟ್ಟ ಪುಟ್ಟ ಪಕ್ಷಿಗಳು ಬೆಂಕಿಗೆ ಸುಟ್ಟುಹೋಗಿವೆ.
ಘನತ್ಯಾಜ್ಯ ಘಟಕಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಆದರೆ ಬೆಂಕಿ ಹತೋಟಿಗೆ ಬಾರದ ಕಾರಣ ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕೆಲಸ ಮಾಡಿದರು. ಇನ್ನು ಮತ್ತೆ ಇಂತಹ ಅನಾಹುತ ಆಗದಂತೆ ಕ್ರಮಕೈಗೊಳ್ಳುವುದಾಗಿ ಗ್ರಾಪಂ ಪಿಡಿಓ ರಮೇಶ್ ತಿಳಿಸಿದರು.