ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ | ಕ್ಷಮೆ ಕೇಳಲು ಕನ್ನಡಿಗರಿಂದ ಒತ್ತಾಯ

KAMAL HASAN : ಜನಪ್ರಿಯ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಇತ್ತೀಚೆಗೆ ಹೇಳಿದ ವಿವಾದಾತ್ಮಕ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕರ್ನಾಟಕದಾದ್ಯಂತ ಕನ್ನಡಿಗರಲ್ಲಿ ಆಕ್ರೋಶಗೊಂಡಿದ್ದಾರೆ. ‘ನಿಮ್ಮ ಕನ್ನಡ ನಮ್ಮಿಂದ ಬಂದಿದೆ’ ಎಂಬ ಅವರ ಹೇಳಿಕೆಗೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣವೇ ಕ್ಷಮೆ ಕೇಳಬೇಕು ಎಂಬ ಒತ್ತಾಯದೊಂದಿಗೆ ಪ್ರತಿಭಟನೆ ಆರಂಭವಾಗಿದೆ.

ಚೆನ್ನೈನಲ್ಲಿ ಇತ್ತೀಚೆಗಷ್ಟೆ ನಡೆದ ‘ಥಗ್ ಲೈಫ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡದ ಪವರ್ ಸ್ಟಾರ್ ಶಿವರಾಜ್ ಕುಮಾರ್ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾತನಾಡಿದ ಕಮಲ್ ಹಾಸನ್ ಅವರು, ತಮ್ಮ ಭಾಷಣದ ಭಾಗವಾಗಿ, “ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ವೇದಿಕೆಯಲ್ಲಿ ಇದ್ದ ಶಿವರಾಜ್ ಕುಮಾರ್ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡದೆ ನಗುಮುಖದಲ್ಲೇ ಕಳಿಸಿದ್ದರು. ಆದರೆ, ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕನ್ನಡಿಗರಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಇದೊಂದು ಭಾಷಾ ಸಂಸ್ಕೃತಿಯ ಮೇಲಿನ ಅವಹೇಳನವೆಂದು ಹೇಳಲಾಗುತ್ತಿದೆ.

ರಾಜ್ಯದಾದ್ಯಂತ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಮತ್ತು ಯುವ ಸಮುದಾಯ ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೆಲೆಡೆಗಳಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹಲವಾರು ನಗರಗಳಲ್ಲಿ ನಟ ಕಮಲ್​ ಹಾಸನ್​ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಸಿನಿಮಾ ಬಿಡುಗಡೆಯಾಗಲು ಬಿಡವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಇನ್ನು "ಕನ್ನಡ ಭಾಷೆ ಯಾವುದೇ ಬೇರೆ ಭಾಷೆಯಿಂದ ಬರುತ್ತಿಲ್ಲ. ಇದು ಪ್ರಾಚೀನ ಭಾಷೆ, ಅದು ನಮ್ಮ ಗೌರವ. ಯಾರೂ ಇಂಥ ಅವಹೇಳನಕಾರಿ ಹೇಳಿಕೆ ನೀಡಲು ಯೋಗ್ಯರಾಗಿಲ್ಲ", ಎಂಬುದು ಸಂಘಟನೆಗಳ ಒಗ್ಗಟ್ಟಿನ ಮಾತಾಗಿದೆ. ಕನ್ನಡ ಸಂಘಟನೆಗಳ ಪ್ರಮುಖ ಮುಖಂಡರು ಸ್ಪಷ್ಟವಾಗಿ ಎಚ್ಚರಿಸಿದ್ದು, "ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ದರೆ, ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆಗೊಳ್ಳಲು ಬಿಡುವುದಿಲ್ಲ" ಎಂಬ ತೀವ್ರ ಹೋರಾಟದ ನುಡಿಗಳು ಕೇಳಿಬರುತ್ತಿವೆ.

Author:

...
Keerthana J

Copy Editor

prajashakthi tv

share
No Reviews