ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಬಳಿ ಇಶಾ ಫೌಂಡೇಷನ್ ವತಿಯಿಂದ ನಿರ್ಮಾಣಗೊಂಡಿರುವ ಆದಿಯೋಗಿ ಇಶಾ ಕೇಂದ್ರ ಪ್ರಖ್ಯಾತ ಪ್ರವಾಸಿ ತಾಣವಾಗಿ ಬದಲಾಗ್ತಿದೆ. ದಿನೇದಿನೇ ಇಲ್ಲಿಗೆ ಭೇಟಿಕೊಡುತ್ತಿರುವ ಪ್ರಸಾಗಿರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಪ್ರತಿನಿತ್ಯ ಸಾಯಂಕಾಲ ನಡೆಯುವ ಲೇಸರ್ ಶೋ ನೋಡೋದಕ್ಕಂತೂ ಸಹಸ್ರ ಸಹಸ್ರ ಭಕ್ತರು ಇಲ್ಲಿ ಬರ್ತಿದ್ದಾರೆ. ಆದ್ರೆ ಈ ಇಶಾ ಫೌಂಡೇಷನ್ ವಿರುದ್ಧ ಇದೀಗ ಸಾಲು ಸಾಲು ಆರೋಪಗಳು ಕೇಳಿಬಂದಿದ್ದು, ಸಾವಿರಾರು ಮಂದಿ ಇಶಾ ಫೌಂಡೇಷನ್ ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಸದ್ಗುರು ಅಂತಲೇ ಕರೆಸಿಕೊಳ್ಳೋ ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ವಿರುದ್ಧ ಆವಲಗುರ್ಕಿ ಸುತ್ತಮುತ್ತಲಿನ ಹಳ್ಳಿಯ ರೈತರು ಸಿಡಿದೆದ್ದಿದ್ದಾರೆ. ಇಶಾ ಫೌಂಡೇಷನ್ ಪ್ರವೇಶ ದ್ವಾರದ ಎದುರು ಜಮಾಯಿಸಿದ ಸಾವಿರಾರು ಹೋರಾಟಗಾರರು ಮತ್ತು ರೈತರು ಇಶಾ ಫೌಂಡೇಷನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಇಶಾ ವಿರುದ್ಧ ಭೂಗಳ್ಳತನದ ಗಂಭೀರ ಆರೋಪ ಮಾಡಿದ್ದಾರೆ.
ಇಶಾ ಫೌಂಡೇಷನ್ ಗೆ ಹೋಗಲು ಸರ್ಕಾರಿ ಗೋಮಾಳ, ಅರಣ್ಯ, ಗೋ ಕಾಡುಗಳನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ. ಸರ್ಕಾರಿ ಸರ್ವೆ ನಂಬರ್ ಗಳಾದ ಅವಲಗುರ್ಕಿ ಗ್ರಾಮದ ಸರ್ವೆ ನಂಬರ್ 174ರಲ್ಲಿ 4 ಎಕರೆ 23 ಗುಂಟೆ, ಸರ್ವೆ ನಂಬರ್ 175ರಲ್ಲಿ 1 ಎಕರೆ 37 ಗುಂಟೆ, ಕವರ್ನಹಳ್ಳಿ ಸರ್ವೆ ನಂಬರ್ 137ರಲ್ಲಿ 19 ಗುಂಟೆ, ಸರ್ವೆ ನಂಬರ್ 123 ರಲ್ಲಿ 1 ಎಕರೆ 18 ಗುಂಟೆ ಜಮೀನಿಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಸ್ವತ್ತಿನಲ್ಲಿ ರಸ್ತೆ ನಿರ್ಮಾಣ ಮಾಡಿ ಅದಕ್ಕೆ ಸ್ಥಳಿಯರು ಸೇರಿದಂತೆ ಪ್ರವಾಸಿಗರ ವಾಹನಗಳಿಗೆ ಟೋಲ್ ಸಂಗ್ರಹ ಮಾಡ್ತಿದ್ದಾರೆ ಅಂತಾ ಸತಳಿಯರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯರಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ದೂರುಗಳು ಸಹ ಬಂದಿದ್ದವು.ಇದರಿಂದ ಚಿಕ್ಕಬಳ್ಳಾಪುರ ತಹಶಿಲ್ದಾರ್ ರಸ್ತೆ ತೆರವು ಮಾಡಲು ನೊಟೀಸ್ ಸಹ ಜಾರಿ ಮಾಡಿದ್ದಾರೆ. ಆದ್ರೂ ಇಶಾ ಪೌಂಡೇಶನ್ ನ್ಯಾಯಾಲಯದ ಮೆಟ್ಟಿಲೇರಿದೆ. ಇಶಾ ಪೌಂಡೇಶನ್ ಈ ನಡೆಯನ್ನ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಒಂದು ಕಡೆ ಇಶಾ ಫೌಂಡೇಷನ್ ವಿರುದ್ಧ ಸರ್ಕಾರಿ ಜಮೀನುಗಳನ್ನ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ರೆ, ಮತ್ತೊಂದೆಡೆ ಈ ಇಶಾ ಫೌಂಡೇಷನ್ನಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಗಳಾಗ್ತಿವೆಯಂತೆ. ಇಶಾ ಫೌಂಡೇಷನ್ಗೆ ಹಗಲು ರಾತ್ರಿಯೆನ್ನದೇ ಪ್ರತಿನಿತ್ಯ ಸಾವಿರಾರು ವಾಹನಗಳು ಬರ್ತಿರೋದ್ರಿಂದ ಇಡೀ ಊರಿಗೆ ಊರೇ ಧೂಳು ತುಂಬಿಕೊಳ್ಳುತ್ತಿದೆಯಂತೆ. ಜೊತೆಗೆ ಹೆಚ್ಚಿನ ವಾಹನಗಳ ಓಡಾಟದಿಂದಾಗಿ ಅಪಘಾತ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆಯಂತೆ. ಮತ್ತೊಂದು ಕಡೆ ಸಂಜೆ ೭.೧೫ರ ಸುಮಾರಿಗೆ ಶುರುವಾಗುವ ಲೇಸರ್ ಶೋ ನೋಡೋದಕ್ಕೆ ಏಕಕಾಲದಲ್ಲಿ ಸಾವಿರಾರು ವಾಹನಗಳು ಬರೋದ್ರಿಂದ ಕಿ.ಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗ್ತಿದ್ದು, ಈ ಭಾಗದ ಜನರು ಓಡಾಡೋದೇ ಕಷ್ಟವಾಗಿದೆಯಂತೆ. ತಮ್ಮ ಹೊಲ, ತೋಟಗಳಿಗೆ ಹೋಗೋದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆಯಂತೆ. ಎಮರ್ಜೆನ್ಸಿ ಸಂದರ್ಭಗಳಲ್ಲಿಯೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆಯಂತೆ.
ಇನ್ನು ಇಶಾ ಫೌಂಡೇಷನ್ನವರು ಸರ್ಕಾರಿ ನೋಟೀಸ್ಗಳಿಗೂ ಕೇರ್ ಮಾಡದೇ ಅವುಗಳಿಗೂ ಸ್ಟೇ ತರುವ ಕೆಲಸವನ್ನ ಮಾಡ್ತಿದ್ದಾರಂತೆ. ಜೊತೆಗೆ ಅವರ ವಿರುದ್ಧ ಯಾರಾದ್ರೂ ದೂರನ್ನ ನೀಡಿದ್ರೆ ಅಂಥವರ ವಿರುದ್ಧ ಕ್ರಮಿನಲ್ ಕೇಸ್ ದಾಖಲಿಸುವ ಕೆಲಸ ಮಾಡ್ತಿದ್ದಾರೆ ಅಂತಲೂ ಆರೋಪಿಸ್ತಿದ್ದಾರೆ. ಅದೇನೇ ಇರಲಿ..ಇತ್ತೀಚೆಗೆ ದೇವರ ಹೆಸರು ಹೇಳಿಕೊಂಡು ಇಶಾ ಫೌಂಡೇಷನ್ ಪ್ರತಿನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದೆ. ಇದೀಗ ಸಂಸ್ಥೆಯ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೆ ಕಾದುನೋಡಬೇಕಿದೆ.