GUBBI NEWS : ಗುಬ್ಬಿ ತಾಲೂಕಿನ ಕುನ್ನಾಲ ಗ್ರಾಮ ಪಂಚಾಯ್ತಿಯ ಸದಸ್ಯೆಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಲ್ಲದೇ, ನಿಯಮ ಮೀರಿ ಸಿಹಿ ನೀರಿನ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕುನ್ನಾಲ ಗ್ರಾಮ ಪಂಚಾಯ್ತಿಯ ಹಾಲಿ ಸದಸ್ಯೆಯಾಗಿರೋ ಚೈತ್ರ ಮುರುಳೀಧರ್ ಎಂಬುವವರು ನಿಯಮ ಮೀರಿ ಸಿಹಿ ನೀರು ಫ್ಯಾಕ್ಟರಿ ನಡೆಸುತ್ತಿರೋ ಪ್ರಕರಣ ಬೆಳಕಿಗೆ ಬಂದಿದೆ.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕುನ್ನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆ.ಜಿ.ಟೆಂಪಲ್ ಬಳಿಯ ಲಿಂಗಮ್ಮನಹಳ್ಳಿ ಗ್ರಾಮ ಬಳಿ ಹಾಲಿ ಸದಸ್ಯೆ ಚೈತ್ರ ಎಂಬುವವರು ಅಕ್ರಮ ಸಿಹಿ ನೀರಿನ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಈ ಫ್ಯಾಕ್ಟರಿಯನ್ನು ಸದಸ್ಯೆ ಚೈತ್ರ 2023ರಲ್ಲಿ ಒಂದು ವರ್ಷಗಳ ಅವಧಿಗೆ ಲೈಸೆನ್ಸ್ ಪಡೆದು ನೀರಿನ ಫ್ಯಾಕ್ಟರಿ ನಡೆಸುತ್ತಿದ್ದರು. ಆದ್ರೆ ಆ ಲೈಸೆನ್ಸ್ ಮುಗಿದು ಸುಮಾರು 7 ತಿಂಗಳೇ ಕಳೆದ್ರು ಲೈಸೆನ್ಸ್ ರಿನಿವಲ್ ಮಾಡಿಕೊಳ್ಳದೇ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅಲ್ದೇ ನೀರಿನ ಕ್ಯಾನ್ ಮೇಲೆ ಯಾವುದೇ ಕಂಪನಿಯ ಹೆಸರನ್ನು ಹಾಕದೇ ಮಾರಾಟ ಮಾಡ್ತಾ ಇರೋದು ಕಂಡು ಬಂದಿದೆ, ಒಂದು ವರ್ಷದ ನಂತರ ಪರವಾನಗಿ ನವೀಕರಣ ಮಾಡಿಕೊಂಡು ಫ್ಯಾಕ್ಟರಿ ನಡೆಸುವ ಬದಲು ಅಕ್ರಮವಾಗಿ ಸರ್ಕಾರಕ್ಕೆ ವಂಚಿಸಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಇದಲ್ಲದೇ ಸುಮಾರು 15 ದಿನಗಳಿಗೊಮ್ಮೆ ಆದ್ರು ಫ್ಯಾಕ್ಟರಿಯ ನೀರಿನ ಸ್ಯಾಂಪಲ್ನನ್ನು ಲ್ಯಾಬ್ಗೆ ಕಳುಹಿಸಿ, ಪರೀಕ್ಷಿಸಬೇಕೆಂಬ ನಿಯಮ ಇದೆ. ಆದ್ರೆ ಇವೆಲ್ಲಾ ನಿಯಮಗಳನ್ನು ಗ್ರಾಮ ಪಂಚಾಯ್ತಿ ಸದಸ್ಯೆ ಚೈತ್ರಾ ಗಾಳಿಗೆ ತೂರಿ ಫ್ಯಾಕ್ಟರಿ ನಡೆಸುತ್ತಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದಲ್ಲದೇ ಗಮನಿಸಬೇಕಾದ ಬಹು ಮುಖ್ಯವಾದ ವಿಚಾರ ಏನಂದ್ರೆ, ಚೈತ್ರ ಎಂಬುವರು ಗ್ರಾಮ ಪಂಚಾಯ್ತಿ ಹಾಲಿ ಸದಸ್ಯೆ ಜೊತೆಗೆ ಇವರು ಓಬಿಸಿ-ಬಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಆದ್ರೆ ಈ ಕ್ಷೇತ್ರದಲ್ಲಿ ನಿಲ್ಲುವವರು ಯಾವುದೇ GST ಹಾಗೂ ಟ್ಯಾಕ್ಸ್ ಪೇಯರ್ ಆಗಿರಬಾರದು ಎಂಬ ಆದೇಶ ಇದೆ. ಆದ್ರೆ ಚೈತ್ರ ಮುರಳಿಧರ್ ಅವರು ತೆರಿಗೆದಾರರು ಕೂಡ ಆಗಿದ್ದಾರೆ. ನಾನೊಬ್ಬ ಗ್ರಾಮ ಪಂಚಾಯಿತಿ ಸದಸ್ಯೆ ಎಂಬ ಕಾರಣಕ್ಕೋ ಅಥವಾ ಇಂತಹ ಕಾನೂನುಗಳು ಜನಪ್ರತಿನಿಧಿಗಳಾದ ನಮಗೆ ಅನ್ವಯಿಸುವುದಿಲ್ಲ ಎಂಬ ಉದ್ದಟದಿಂದಲೋ ಇಂದಿಗೂ ಪರವಾನಗಿ ನವೀಕರಣ ಮಾಡಿಕೊಳ್ಳದೇ ಸರ್ಕಾರಕ್ಕೆ ದ್ರೋಹ ಎಸಗುತ್ತಿದ್ದಾರೆ, ಇನ್ನಾದ್ರು ನೀರು ಫ್ಯಾಕ್ಟರಿಯ ಲೈಸೆನ್ಸ್ ರಿನೀವಲ್ ಮಾಡಿಕೊಂಡು ಫ್ಯಾಕ್ಟರಿ ನಡೆಸುತ್ತಾರಾ…? ಇತ್ತ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.