ರಾಜ್ಯ : ಕರ್ನಾಟಕದಲ್ಲಿ ಕೊರೊನಾ (COVID-19) ಮಹಾಮಾರಿಯ ಆತಂಕ ಮತ್ತೆ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 35 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 32 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿವೆ. ಇಂದಿಗೂ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ಚರ್ಚೆಯಲ್ಲಿ ತೊಡಗಿಕೊಂಡಿವೆ.
ಬೆಂಗಳೂರು ನಗರದ ಮೂವರು ಮಕ್ಕಳು ಸೇರಿದಂತೆ 9 ತಿಂಗಳ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆ ಮಗುವಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗರ್ಭಿಣಿ ಮಹಿಳೆಯೊಬ್ಬರಿಗೂ ಸೋಂಕು ಪ್ರಕರಣವೂ ಬೆಳಗಾವಿಯಲ್ಲಿ ಕಂಡುಬಂದಿದ್ದು, 25 ವರ್ಷದ ಗರ್ಭಿಣಿ ಮಹಿಳೆ ಪ್ರೈವೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸೋಂಕು ಪ್ರಕರಣಗಳ ಏರಿಕೆಯಿಂದಾಗಿ ರ್ಯಾಂಡಮ್ ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವ ಕುರಿತು ಚರ್ಚೆಯಾಗಿದ್ದು, ಕೆಮ್ಮು, ಜ್ವರದ ಲಕ್ಷಣವಿರುವವರಿಗೆ ಕೋವಿಡ್ ಪರೀಕ್ಷೆ ನೀಡುವ ಸಲಹೆ ನೀಡಲಾಗಿದೆ. ಕೊರೊನಾ ಸೋಂಕು ಪತ್ತೆಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಇದೀಗ ಕೋವಿಡ್ ತಪಾಸಣೆ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ.
ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳು:
* ಗರ್ಭಿಣಿಯರು, ಮಕ್ಕಳು ಹಾಗೂ ಕಾಮಾರ್ಬಿಟ್ ರೋಗಿಗಳವರು ಮುಂಜಾಗೃತ ಕ್ರಮ ಕೈಗೊಳ್ಳಬೇಕು.
* ಜನಸಮೂಹದ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯ.
* ಕೈ ಸ್ಯಾನಿಟೈಸೇಶನ್ ಹಾಗೂ ವೈಯಕ್ತಿಕ ಸ್ವಚ್ಛತೆ ಕಾಯ್ದುಕೊಳ್ಳುವುದು.
* SARI (Severe Acute Respiratory Infection) ಗುಣ ಲಕ್ಷಣಗಳಿದ್ದವರು ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಆರೋಗ್ಯ ಇಲಾಖೆ ಹೆಚ್ಚು ಜಾಗೃತಿ ವಹಿಸಲು ಎಲ್ಲರಿಗೂ ವಿನಂತಿ ಮಾಡಿಕೊಂಡಿದ್ದು, ಮಕ್ಕಳು, ವೃದ್ಧರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ವಿಶೇಷ ತಾಳ್ಮೆಯಿಂದ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿ ಸೂಚಿಸಿದೆ.