ಮಂಡ್ಯ : ಟ್ರಾಫಿಕ್ ಪೊಲೀಸರು ಮಾಡಿದ ಒಂದೇ ಒಂದು ಯಡವಟ್ಟಿನಿಂದಾಗಿ 3 ವರ್ಷದ ಮಗು ಸ್ಥಳದಲ್ಲಿಯೇ ಜೀವ ಕಳೆದುಕೊಂಡಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಮಗುವನ್ನು ಹೃತೀಕ್ಷ ಎನ್ನಲಾಗಿದೆ. ತಮ್ಮ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು. ಇತ್ತ ಪೊಲೀಸರ ಯಡವಟ್ಟಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಹೀಗೆ ಸಾವನ್ನಪ್ಪಿರುವ ಮಗುವನ್ನು ತಮ್ಮ ಮಡಿಲಿನಲ್ಲಿ ಹಾಕಿಕೊಂಡು ಗೋಳಿಡುಸುತ್ತಿರುವ ಪೋಷಕರ ಹೆಸರು ವಾಣಿ ಮತ್ತು ಅಶೋಕ್. ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ನಿವಾಸಿಗಳು. ಇವರ ಮೂರು ವರ್ಷದ ಹೃತೀಕ್ಷ ಎಂಬ ಮಗುವೇ ಸಾವನ್ನಪ್ಪಿದ ದುರ್ದೈವಿ. ಕಣ್ಣೆದುರೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದ್ದನ್ನು ಕಂಡು ಅಕ್ಷರಶಃ ಕುಗ್ಗಿಹೋಗಿದ್ದಾರೆ.
ಇನ್ನು ವಾಣಿ-ಅಶೋಕ್ ಪುತ್ರಿ ಹೃತೀಕ್ಷಗೆ ನಾಯಿ ಕಚ್ಚಿತ್ತು. ಹೀಗಾಗಿ ಆ ಕೂಡಲೇ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗೆಂದು ಬೈಕ್ ಅಡ್ಡಗಟ್ಟಿದ್ದಾರೆ. ಇದೇ ವೇಳೆ ಬೈಕ್ನಲ್ಲಿದ್ದ ತಂದೆ, ತಾಯಿ ಹಾಗೂ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಯತಪ್ಪಿ ಬಿದ್ದ ತಕ್ಷಣ ಕೆಳಗೆ ಬಿದ್ದ ಪರಿಣಾಮ ಹೃತೀಕ್ಷಳ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರವಾದಿಂದ ಮಗು ಸ್ಥಳದಲ್ಲೇ ಜೀವಬಿಟ್ಟಿದೆ.
ಇತ್ತ ಮಗು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲುಮುಟ್ಟಿತ್ತು. ಪೋಷಕರು ಮಿಮ್ಸ್ ಆಸ್ಪತ್ರೆ ಎದುರು ರಸ್ತೆಯಲ್ಲೇ ಶವವಿಟ್ಟು ಪ್ರತಿಭಟಿಸಿದ್ರು. ಅಲ್ಲದೇ ಪೊಲೀಸರ ನಡೆಗೆ ಸಾರ್ವಜನಿಕರು ಕೂಡ ತೀವ್ರ ಆಕ್ರೋಶ ಹೊರ ಹಾಕಿದ್ರು.. ಮಂಡ್ಯ ಮಿಮ್ಸ್ ಆಸ್ಪತ್ರೆ ಎದುರಿನ ಹೆದ್ದಾರಿ ತಡೆದು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ತಪ್ಪಿತಸ್ಥರ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ರು. ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಸ್ಥಳದಲ್ಲಿಯೇ ಮೂವರು ಟ್ರಾಪಿಕ್ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
ಇನ್ನು ಮೃತ ಹೃತೀಕ್ಷ ತಂದೆ ಅಶೋಕ್ ನೋವನ್ನ ತೋಡಿಕೊಂಡಿತ್ತು ಹೀಗೆ. ನಮ್ಮ ಮಗುವಿಗೆ ನಾಯಿ ಕಚ್ಚಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವು. ಎದುರಿಗೆ ಬಂದ ಪೊಲೀಸರು ನಮ್ಮನ್ನ ಮುಂದೆ ಹೋಗಲು ಬಿಡಲಿಲ್ಲ. ತಮ್ಮ ಗಾಡಿಯನ್ನು ಅಡ್ಡಹಾಕಿದ ಕಾರಣ ನಮ್ಮ ಗಾಡಿ ಸ್ಕಿಡ್ ಆಯಿತು. ನಮ್ಮ ಮಗು ಕೆಳಗೆ ಬಿದ್ದ ತಕ್ಷಣ ಬೇರೆ ಗಾಡಿ ನಮ್ಮ ಮಗುವಿನ ಮೇಲೆ ಹರಿದಿದೆ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ. ನೀವು ನನ್ನ ಮಗಳ ತಂದು ಕೊಡ್ತೀರಾ? ನೀವು ನನ್ನ ಮಗಳನ್ನು ತಂದು ಕೊಡ್ತೀರಾ ಎಂದು ಕಣ್ಣೀರು ಇಟ್ಟಿದ್ದಾರೆ.
ಅದೇನೆ ಇರಲಿ ಪೊಲೀಸರು ಮಾಡಿರುವ ಈ ಯಡವಟ್ಟಿನಿಂದಾಗಿ ಪುಟ್ಟ ಕಂದಮ್ಮನ ಜೀವ ಹೋಗಿದೆ. ಸರ್ಕಾರ ಎಷ್ಟೇ ಹಣ ನೀಡಿದ್ರು ಹೋದ ಜೀವ ಮತ್ತೆ ಬರುವುದಿಲ್ಲ. ಹೀಗಾಗಿ ಟ್ರಾಪಿಕ್ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲಿ. ಆದ್ರೆ ಕೆಲವು ಸಂದರ್ಭಗಳಲ್ಲಿ ಕಾನೂನಿಗಿಂತ ಜೀವ ದೊಡ್ಡಲದಲ್ಲ ಅಂತಾ ತಿಳಿದುಕೊಳ್ಳಬೇಕಿದೆ. ಎಸ್ಪಿ ಸಾಹೇಬ್ರೇನೋ ಯಡವಟ್ಟು ಮಾಡಿದ್ದ ಪೊಲೀಸರನ್ನ ಅಮಾನತು ಮಾಡಿದ್ದಾರೆ. ಮತ್ತೆ ಅವರು ಕೆಲಸಕ್ಕೆ ಜಾಯಿನ್ ಆಗ್ತಾರೆ. ಆದ್ರೆ ಹೋಗಿರುವ ಜೀವವನ್ನು ತಂದು ಕೊಡೊಕೆ ಆಗುತ್ತ. ಹೀಗಾಗಿ ಕರ್ತವ್ಯ ಪಾಲನೆಯ ಹೆಸರಲ್ಲಿ ಪೊಲೀಸರು ಒಂದು ಕ್ಷಣ ಮನುಷ್ಯತ್ವವನ್ನು ಮರೆತಾಗ ಏನಾಗುತ್ತದೆ ಅನ್ನೋದಕ್ಕೆ ಇದೊಂದು ದೊಡ್ಡ ಉದಾಹರಣೆ.