RAIN ALERT : ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯ ಸಹಿತ ಮಳೆಯಾಗುವ ಸಂಭವವಿದೆ.
ಮಧ್ಯ, ಪೂರ್ವ ಹಾಗೂ ವಾಯುವ್ಯ ಭಾರತದಲ್ಲಿ ಜೂನ್ 18ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನವದೆಹಲಿಗೆ ಸಾಮಾನ್ಯವಾಗಿ ಜೂನ್ 30ರ ವೇಳೆಗೆ ಮುಂಗಾರು ಎಂಟ್ರಿಯಾಗುತ್ತಿದ್ದರೂ, ಈ ಬಾರಿ ಜೂನ್ 19 ರಿಂದ 25ರ ನಡುವೆ ಮುಂಗಾರು ಪ್ರವೇಶಿಸಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಈ ವರ್ಷ ಮುಂಗಾರು ತನ್ನ ನಿಯಮಿತ ವೇಳೆಗೆ ಮುನ್ನವೇ ಹಲವು ಭಾಗಗಳನ್ನು ಆವರಿಸಿತು. ಸಾಮಾನ್ಯವಾಗಿ ಜೂನ್ 1 ನಂತರ ಕರ್ನಾಟಕಕ್ಕೆ ಮುಂಗಾರು ಬರುತ್ತಿದ್ದರೆ, ಈ ಬಾರಿ ಮೇ 24ರಿಂದಲೇ ಕೇರಳದಲ್ಲಿ ಮಳೆ ಪ್ರಾರಂಭವಾಗಿ, ಬಳಿಕ ಕರ್ನಾಟಕಕ್ಕೂ ವಿಸ್ತರಿಸಿತು.
ಕೊನೆಯ ಕೆಲ ದಿನಗಳಿಂದ ತಗ್ಗಿದ್ದ ಮಳೆ ಈಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮತ್ತೆ ಚುರುಕುಗೊಳ್ಳುತ್ತಿದೆ. ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾದ ಬಳಿಕ ಇನ್ನೂ ನಾಲ್ಕೈದು ದಿನ ಈ ಪರಿಸ್ಥಿತಿ ಮುಂದುವರಿಯಲಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂಗಾರಿನ ಎರಡನೇ ಹಂತದಲ್ಲಿ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್ ಹಾಗೂ ಪೂರ್ವ ಉತ್ತರ ಪ್ರದೇಶಗಳಲ್ಲಿ ಮಳೆ ಸುರಿಯಲಿದ್ದು, ಈ ಭಾಗಗಳಲ್ಲಿಯೂ ಬಿರುಗಾಳಿ ಮಳೆಯ ಮುನ್ಸೂಚನೆ ನೀಡಲಾಗಿದೆ.