BELAGAVI RAIN EFFECT : ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಗೋಕಾಕ ಮತ್ತು ಯರಗಟ್ಟಿ ತಾಲ್ಲೂಕುಗಳಲ್ಲಿ ಮಳೆ ಸಂಬಂಧಿತ ಘಟನೆಗಳಿಂದಾಗಿ ಜೀವಹಾನಿಯೂ ಸಂಭವಿಸಿದೆ.
ಗೋಕಾಕ ತಾಲ್ಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಮನೆಗೆ ಸೇರಿದ ಮಣ್ಣಿನ ಗೋಡೆ ಕುಸಿದ ಪರಿಣಾಮ, ಫಕ್ಕೀರವ್ವ ಲಕ್ಷ್ಮಣ ಹಾವೇರಿ (65) ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ. ಮಣ್ಣಿನಲ್ಲಿ ಸಿಲುಕಿದ್ದ ಅವರನ್ನು ಸ್ಥಳೀಯರು ಹೊರತೆಗೆದರೂ, ಫಲಕಾರಿಯಾಗಿಲ್ಲ. ಇನ್ನು ಮೃತದೇಹವನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಬೆಳಗಾವಿಯ ಚಿಕ್ಕಬೂದನೂರ ಗ್ರಾಮದಲ್ಲಿ ನಿನ್ನೆ ರಾತ್ರಿ ತುಂಬಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಯತ್ನಿಸಿದ್ದ ಆಟೋ ಚಾಲಕ, ಆಟೋ ಸಮೇತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಅದೃಷ್ಟವಶಾತ್ ಸ್ಥಳೀಯರು ಗಮನಿಸಿ ಹಗ್ಗ ಬಳಸಿ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದರು. ಈ ಘಟನೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಪರಿಣಾಮವಾಗಿ ನದಿ-ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದೆ. ಬೈಲಹೊಂಗಲ, ಸವದತ್ತಿ, ಗೋಕಾಕ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಹಾನಿ ವರದಿಯಾಗಿದೆ. ಇನ್ನು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಗೆ ಜಾಗೃತವಿರಲು ಮನವಿ ಮಾಡಲಾಗಿದೆ.