CHIKKAMAGALURU NEWS : ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ದಟ್ಟ ಮಂಜು, ಸೊರಗುವ ರಸ್ತೆಗಳು ಮತ್ತು ಕಡಿಮೆಯಾದ ದೃಶ್ಯಮಾನತೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹೆಚ್ಚಾಗಿ ಓಡಾಡುವ ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರದೇಶ ಹಾಗೂ ಮೂಡಿಗೆರೆ ತಾಲ್ಲೂಕಿನ ರಾಮಣ್ಣನ ಗಂಡಿ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾದ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿ ಸುತ್ತಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆ ದತ್ತಪೀಠಕ್ಕೆ ತೆರಳುವ ಪ್ರಮುಖ ಮಾರ್ಗದಲ್ಲಿ ಸಂಭವಿಸಿದ ಕಾರಣ, ಸಾವಿರಾರು ಪ್ರವಾಸಿಗರ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದವು. ಪ್ರವಾಸಿ ಮಿತ್ರರು ಹಾಗೂ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರು ತೆರವುಗೊಳಿಸಿ ವಾಹನಗಳ ಚಲನವಲನ ಸುಗಮಗೊಳಿಸಿದ್ದಾರೆ.
ಮೂಡಿಗೆರೆ ತಾಲೂಕಿನ ರಾಮಣ್ಣನ ಗಂಡಿ ಬಳಿ ಮತ್ತೊಂದು ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ಭಾರಿ ಗಾಳಿ-ಮಳೆಯಲ್ಲಿ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿವೆ. ಇದೇ ಪ್ರದೇಶದಲ್ಲಿ ಕಳೆದ ವಾರ ಎರಡು ಕಾರುಗಳು ಹೇಮಾವತಿ ಉಪ ನದಿಗೆ ಬಿದ್ದ ಘಟನೆ ನಡೆದಿತ್ತು. ಇದರಿಂದ ಈ ಮಾರ್ಗದ ಭದ್ರತೆ ಕುರಿತು ಗಂಭೀರ ಚಿಂತೆ ವ್ಯಕ್ತವಾಗಿದೆ. ರಸ್ತೆ ಇಳಿಜಾರಿನಲ್ಲಿ ಸೂಕ್ತ ಚಿಹ್ನೆಗಳು, ಸೆಫ್ಟಿ ಗಾರ್ಡ್ ಗಳಿಲ್ಲ ಎಂಬ ಕಾರಣದಿಂದ ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.