GUBBI : ದಿನೇ ದಿನೇ ತುಮಕೂರಿನಲ್ಲಿ ಹೇಮೆ ಕಾವು ಹೆಚ್ಚಾಗುತ್ತಿದೆ. ಹೇಮೆ ವಿಚಾರವಾಗಿ ಹೋರಾಟಗಾರರು ಸರ್ಕಾರಕ್ಕೆ ಹಲವು ರೀತಿಯಲ್ಲಿ ಸವಾಲೊಡ್ಡಿ ನಿಂತಿದ್ದಾರೆ. ಇದರ ನಡುವೆ ಕೇಂದ್ರ ಸಚಿವ ಹಾಗೂ ಜಿಲ್ಲೆಯ ಸಂಸದ ವಿ.ಸೋಮಣ್ಣ ಹೇಮೆ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಆ ಆರೋಪಕ್ಕೆ ಉತ್ತರ ಸಿಕ್ಕಿದ್ದು, ಇದೇ ಜೂನ್ 11ಕ್ಕೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಬರುತ್ತಿದ್ದಾರೆ ಅಂತ ಗುಬ್ಬಿಯಲ್ಲಿ ಮೈತ್ರಿ ನಾಯಕರು ಸಭೆ ಕರೆದು ತಿಳಿಸಿದ್ದಾರೆ.
ಗುಬ್ಬಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಬಿಜೆಪಿ ಮುಖಂಡ ದಿಲೀಪ್ ಹಾಗೂ ಜೆಡಿಎಸ್ ಮುಖಂಡ ನಾಗರಾಜು ವಿ.ಸೋಮಣ್ಣ ಕಾಮಗಾರಿ ಸ್ಥಳಕ್ಕೆ ವೀಕ್ಷಿಸಲು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೇಂದ್ರ ರೈಲ್ವೆ, ಜಲಶಕ್ತಿ ಸಚಿವ ವಿ.ಸೋಮಣ್ಣ ಇದೇ ತಿಂಗಳ 11 ರಂದು ಬೆಳಿಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಹೇಮಾವತಿ ಹೋರಾಟಗಾರರು, ರೈತರು, ಮುಖಂಡರು ಸ್ಥಳಕ್ಕೆ ಆಗಮಿಸಿ ನಮ್ಮ ನೀರಿನ ಹಕ್ಕು ಪ್ರತಿಪಾದಿಸಬೇಕಿದೆ ಎಂದು ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕಳ್ಳಿ ಪಾಳ್ಯ ಲೋಕೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಬ್ಯಾಟ ರಂಗೇಗೌಡ, ಜಿ.ಎನ್. ಬೆಟ್ಟಸ್ವಾಮಿ, ಪಿ.ಬಿ. ಚಂದ್ರಶೇಖರಬಾಬು, ಹೊನ್ನ ಗಿರಿಗೌಡ, ಯೋಗಾನಂದಕುಮಾರ್, ಎನ್.ಸಿ.ಪ್ರಕಾಶ್, ಸಾಗರನಹಳ್ಳಿ ವಿಜಯಕುಮಾರ್, ಜಿ.ಡಿ.ಸುರೇಶಗೌಡ, ಮತ್ತಿತ್ತರರು ಹಾಜರಿದ್ದರು.