GADAG : ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯ ಜೀವಿಧಾಮದ 322 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Zone) ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಮೂಲಕ ಘೋಷಿಸಿದೆ.
ಈ ಹಿಂದಿನ ಕರಡು ಅಧಿಸೂಚನೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಇದೀಗ ಈ ಅಂತಿಮ ಘೋಷಣೆಯು ಪ್ರಕಟವಾಗಿದೆ.
ಒಟ್ಟು 322 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎನ್ನಲಾಗಿದ್ದು, ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ. ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ ಸೇರಿದೆ. ಈ ಪ್ರದೇಶದಲ್ಲಿ 62 ಗ್ರಾಮಗಳಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ ಒಂದು ಕಿ.ಮೀನಿಂದ ಗರಿಷ್ಠ 4.30 ಕಿ.ಮೀವರೆಗೆ ಗುರುತಿಸಲಾಗಿದೆ
ಈ ಪ್ರದೇಶದಲ್ಲಿ ತೀವ್ರ ಕೈಗಾರಿಕಾ ಚಟುವಟಿಕೆಗಳು, ಗಣಿಗಾರಿಕೆ, ಕೆಮಿಕಲ್ ಘಟಕಗಳ ಸ್ಥಾಪನೆ ಮೊದಲಾದ ಪರಿಸರ ಹಾನಿಕಾರಕ ಕ್ರಮಗಳು ಇನ್ನು ಮುಂದೆ ನಿಷಿದ್ಧವಾಗಲಿವೆ. ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ ಇರಲಿದೆ. ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಯಾವುದೇ ಅಪಾಯಕಾರಿ ವಸ್ತು ಬಳಕೆ, ಉತ್ಪಾದನೆ ಅಥವಾ ಸಂಸ್ಕರಣೆಗೆ ನಿರ್ಬಂಧ ಇರಲಿದೆ. ಪರಿಸರ, ಜೀವವೈವಿಧ್ಯ ಹಾಗೂ ಸ್ಥಳೀಯ ಜೀವಿಗಳ ರಕ್ಷಣೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ.
ಇನ್ನು ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಹೋಟೆಲ್ಗಳು ಹಾಗೂ ರೆಸಾರ್ಟ್ಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ. ಸರ್ಕಾರದ ನಿರ್ದೇಶನಗಳಂತೆ ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನ ಕಾಯ್ದುಕೊಳ್ಳುವ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.