ಗುಬ್ಬಿ : ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ | ರೈತರಿಂದ ಹಳ್ಳಿಗಳಲ್ಲಿ ಪ್ರಚಾರ ಕಾರ್ಯ

ಗುಬ್ಬಿ : ಹೇಮಾವತಿ ಎಕ್ಸ್‌ ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆ ಖಂಡಿಸಿ ಜಿಲ್ಲಾದ್ಯಂತ ರೈತರು, ಸಚಿವರು, ಮಠಾಧೀಶರು ಪ್ರತಿಭಟನೆ ನಡಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಸರ್ಕಾರ ಯೋಜನೆ ಮಾಡಿಯೇ ತೀರಲು ಮುಂದಾಗಿದೆ. ಗುಬ್ಬಿಯ ಸುಂಕಾಪುರದಲ್ಲಿ ನಡೆಯುತ್ತಿದ್ದ ಕಾಮಗಾರಿ ತಡೆಯಲು ಹೋದ ಹೋರಾಟಗಾರರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೆ ಮೇ 31 ರಂದು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರುದ್ಧ ಬೃಹತ್‌ ಪ್ರತಿಭಟನೆಗೆ ರೈತ ಸಂಘ, ಸಚಿವರು, ಮಠಾಧೀಶರು ತೀರ್ಮಾನಿಸಿದ್ದರು. ಅದರಂತೆ ಇಂದು ಗುಬ್ಬಿಯಲ್ಲಿ ರೈತ ಮುಖಂಡರು ಹಳ್ಳಿ ಹಳ್ಳಿಗೂ ತೆರಳಿ ಪ್ರಚಾರ ಮಾಡುವ ಮೂಲಕ ಬೃಹತ್‌ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ.

ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಜಿ.ಹೊಸಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ, ನಂತರ ಗೋಪಾಲ ಪುರ, ಕೊಪ್ಪ ,ಬಿಕ್ಕೆಗುಡ್ಡ, ಕೆಜಿ.ಟೆಂಪಲ್, ಕೊಡಗಿಹಳ್ಳಿ, ಮುದ್ದನಹಳ್ಳಿಗೆ ತೆರಳಿದ ಮುಖಂಡರು, ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಿಂದ ಆಗುವ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿದರು. ಇದೊಂದು ಅವೈಜ್ಞಾನಿಕ ಕಾಮಗಾರಿ, ಇದನ್ನು ಆರಂಭಿಸಲು ಬಿಡದಂತೆ ಎಲ್ಲರೂ ಒಗ್ಗೂಡಿ ಪ್ರತಿಭಟನೆ ಮಾಡುವ ಅನಿವಾರ್ಯ ಬಂದಿದೆ. ಸುಂಕಪುರದ ಬಳಿ ನಡೆಯುತ್ತಿರುವ ಕಾಮಗಾರಿ ತಡೆದು ಉಗ್ರ ಹೋರಾಟ ಮಾಡಲು ಮುಂದಾಗಲು ಸಜ್ಜಾಗಿ ಎಂದು ಕರೆ ನೀಡಿದರು.

ಗ್ರಾಮೀಣ ಭಾಗದ ಮಹಿಳೆಯರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಲೂಕಿನ ಹಿತ ಕಾಪಾಡುವ ಕೆಲಸ ಮಾಡಬೇಕಿದೆ ಎಂದು ಜೆಡಿಎಸ್ ಮುಖಂಡ ನಾಗರಾಜು ಮಹಿಳೆಯರನ್ನು ಪ್ರತಿಭಟನೆಗೆ ಬರುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಳ್ಳಿಪಾಳ್ಯ ಲೋಕೇಶ್, ಬ್ಯಾಟರಂಗೆಗೌಡ,ರೈತ ಮುಖಂಡರಾದ ವೆಂಕಟೇಗೌಡ ಲೋಕೇಶ್ ಹಾಗೂ ಜೆಡಿಎಸ್ ಮುಖಂಡರು ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.

Author:

...
Sushmitha N

Copy Editor

prajashakthi tv

share
No Reviews