ದೊಡ್ಡಬಳ್ಳಾಪುರ :
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಬೇಲ್ ಪಡೆದು ಹೊರ ಬಂದಿದ್ದರು. ಕೇಸ್ ವಜಾ ಆಯಿತೆಂದು ಕೋರ್ಟ್ಗೆ ಹಾಜರಾಗದೇ, 20 ವರ್ಷದಿಂದ ತಲೆಮರೆಸಿಕೊಂಡಿದ್ದ ಕಳ್ಳರನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ಟ್ರಾನ್ಸ್ ಎಲೆಕ್ಟ್ರಿಕ್ ಮೋಟಾರ್ ಕಾರ್ಖಾನೆಯಲ್ಲಿ ಹೋಂ ಗಾರ್ಡ್ ಆಗಿ ನಾಗರಾಜ್ ಹಾಗೂ ಶ್ರೀನಿವಾಸಲು ಎಂಬುವವರು ಕೆಲಸ ಮಾಡ್ತಾ ಇದ್ದರು. ಕಂಪನಿ ಮುಚ್ಚುವ ವೇಳೆ ಮೋಟಾರ್ಗಳನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದರು. ಮೂರು ತಿಂಗಳುಗಳ ಕಾಲ ಜೈಲುವಾಸ ಕೂಡ ಅನುಭವಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು.
ಬೇಲ್ ಸಿಕ್ಕ ಬಳಿಕ ಕೇಸ್ ವಜಾ ಆಯಿತೆಂದು ತಪ್ಪಾಗಿ ತಿಳಿದು ಇಬ್ಬರು ಆರೋಪಿಗಳು ಕೋರ್ಟ್ಗೆ ಅಟೆಂಡ್ ಆಗ್ತಿರಲಿಲ್ಲ. ಹೀಗಾಗಿ ಕೋರ್ಟ್ ಇವರಿಬ್ಬರನ್ನು ತಲೆ ಮರೆಸಿಕೊಂಡ ಆರೋಪಿಗಳು ಎಂದು ನಿರ್ಧಾರ ಮಾಡಿದ್ದು, ಅವರನ್ನು ಬಂಧಿಸುವಂತಯೇ ಕೋರ್ಟ್ ನಿರ್ದೇಶನ ನೀಡಿತ್ತು. ಆರೋಪಿಗಳನ್ನು ಬೆನ್ನತ್ತಿದ್ದ ದೊಡ್ಡಬಳ್ಳಾಪುರ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ನಾಗರಾಜ್ ಆಂದ್ರಪ್ರದೇಶದಲ್ಲಿ ಹೋಂಗಾರ್ಡ್ ಆಗಿ ಕೆಲಸ ಮಾಡಿದ್ದಾನೆ. ಪುಟ್ಟಪರ್ತಿ ಟೌನ್, ಬುಕ್ಕ ಪಟ್ಟಣಂ, ಧರ್ಮಾವರಂ ನಲ್ಲಿ ಕೆಲಸ ಮಾಡಿದ್ದಾನೆ. ಮತ್ತೊಬ್ಬ ಆರೋಪಿ ಶ್ರೀನಿವಾಸ್ ಎಂಬಿಎ ವ್ಯಾಸಾಂಗ ಮಾಡಿ, ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರೋ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ. ಆರೋಪಿಗಳು ಬೇಲ್ ಮೇಲೆ ಹೊರ ಬಂದು ನಾವು ಬಿಡುಗಡೆ ಆಗಿದ್ದೀವಿ ಅಂತಾ ಭ್ರಮೆಯಲ್ಲೋ ಅಥವಾ ದುರುದ್ದೇಶದಿಂದಲೋ ತಲೆಮರೆಸಿಕೊಂಡಿರೋ ಆರೋಪಿಗಳನ್ನು 20 ವರ್ಷಗಳ ಬಳಿಕ ಬಂಧಿಸಲಾಗಿದೆ. ಇದು ಇಲಾಖೆಯ ನಿರ್ಲಕ್ಷ್ಯವೋ ಅಥವಾ ಕಳ್ಳರ ಚಾಲಕಿತನವೋ ತಿಳಿಯದು. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಸ್ವರೂಪ ಪಡೆಯುತ್ತೋ ಕಾದು ನೋಡಬೇಕಿದೆ.