ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಕೆಲ ತಿಂಗಳ ಹಿಂದೆ ಬಂಧಿತನಾಗಿದ್ದರು. ನಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ದರ್ಶನ್ ಇದೀಗ ಮತ್ತೆ ಚಿತ್ರೀಕರಣ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.
‘ಡೆವಿಲ್’ ಎಂಬ ಬಹು ನಿರೀಕ್ಷಿತ ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ದರ್ಶನ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು ವಿಚಾರಣೆ ನಡೆಸಿ, ಅನುಮತಿ ನೀಡಿದ್ದಾರೆ.
CRPC ಸೆಕ್ಷನ್ 439(1)(b) ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ಪ್ರಕಾರ, ದರ್ಶನ್ ಜೂನ್ 1ರಿಂದ 25ರವರೆಗೆ ದುಬೈ ಮತ್ತು ಯೂರೋಪ್ ದೇಶಗಳಿಗೆ ಸಿನಿಮಾ ಚಿತ್ರೀಕರಣಕ್ಕೆ ತೆರಳಲಿದ್ದಾರೆ.
ಇನ್ನು ಅಭಿಮಾನಿಗಳ ನಿರೀಕ್ಷೆಯ ನಡುವೆಯೇ, ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಚಿತ್ರೀಕರಣ ವೇಗ ಪಡೆದುಕೊಳ್ಳುತ್ತಿದೆ. ಕೋರ್ಟ್ ಅನುಮತಿಯನ್ನು ಪಾಲಿಸಿಕೊಂಡು, ನಟ ದರ್ಶನ್ ಮತ್ತೊಮ್ಮೆ ಸಿನಿಮಾ ಲೋಕದಲ್ಲಿ ಧೂಳೆಬ್ಬಿಸಲು ತಯಾರಿ ನಡೆಸಿದ್ದಾರೆ.