DAKSHINA KANNADA: ಬಹು ನಿರೀಕ್ಷಿತ 'ಕಾಂತಾರ ಅಧ್ಯಾಯ-1' ಚಿತ್ರದ ಚಿತ್ರೀಕರಣದ ವೇಳೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಚಿತ್ರತಂಡದವರು ಇದ್ದ ಸಣ್ಣ ಬೋಟ್ ಮಗುಚಿ ಬಿದ್ದ ಘಟನೆ ಭಾನುವಾರ ಮಾಣಿ ಪಟ್ಟಣದ ಪಿಕಪ್ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಅದೃಷ್ಠವಶಾತ್ ಯಾವುದೇ ಅಪಾಯ ಅಥವಾ ಪ್ರಾಣಾಹಾನಿಯಾಗಿಲ್ಲ.
ಇನ್ನು ಘಟನೆ ಸಮಯದಲ್ಲಿ ರಿಷಬ್ ಶೆಟ್ಟಿ, ಕ್ಯಾಮೆರಾ ಸಿಬ್ಬಂದಿ ಸೇರಿದಂತೆ ಕೆಲವು ಸದಸ್ಯರು ಬೋಟ್ನಲ್ಲಿ ಇದ್ದರು. ಶೂಟಿಂಗ್ ಹಿನ್ನೀರಿನ ದಡದ ಸಮೀಪ, ಸುಮಾರು ಮೂರು ಅಡಿ ಆಳದ ನೀರಿನಲ್ಲಿ ನಡೆಯುತ್ತಿದ್ದಾಗ, ಬೋಟ್ ಮಗುಚಿ ಬಿದ್ದಿದೆ. ಬೋಟ್ ಮುಗುಚಿದಾಗ ರಿಷಬ್ ಶೆಟ್ಟಿ ಸೇರಿದಂತೆ ಎಲ್ಲರೂ ನೀರಿನಲ್ಲಿ ಬಿದ್ದಿದ್ದು, ಈಜಿ ದಡ ಸೇರಿದ್ದಾರೆ. ಆದರೆ ಕ್ಯಾಮರಾ ಮಾತ್ರ ನೀರಿನಲ್ಲಿ ಬಿದ್ದು ಕಾಣೆಯಾಗಿದೆ.
ಪಿಕಪ್ ಡ್ಯಾಂನ ಹಿನ್ನೀರಿನಲ್ಲಿ ದೊಡ್ಡ ಸೆಟ್ ಹಾಕಿ ಕಾಂತಾರ ಚಾಪ್ಟರ್-1 ಚಿತ್ರೀಕರಣ ನಡೆಯುತ್ತಿದೆ. ಗೌಪ್ಯತೆಯಿಂದ ಶೂಟಿಂಗ್ ಸಾಗುತ್ತಿದ್ದು, ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಕಳೆದ ಕೆಲ ದಿನಗಳಿಂದಲೂ ಚಿತ್ರ ತಂಡವು ಮಾಸ್ತಿಕಟ್ಟೆ ಸುತ್ತಮುತ್ತಲ ಹೋಂ ಸ್ಟೇನಲ್ಲಿ ವಾಸವಿದ್ದು, ಶೂಟಿಂಗ್ನಲ್ಲಿ ತೊಡಗಿಕೊಂಡಿದೆ ಎನ್ನಲಾಗಿದೆ.