ಚಿಂತಾಮಣಿ:
ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಚ್ಚವಾರಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ಗುರ್ರಪ್ಪನ ಪಾಳ್ಯದ 60 ವರ್ಷದ ಅಬ್ದುಲ್ ಬಹಿದ್, ಇವರ ಮಗ 26 ವರ್ಷದ ಸಕ್ಲೇನ್ ಮೃತ ದುರ್ದೈವಿಯಾಗಿದ್ದಾರೆ.
ಕುಟುಂಬ ಸಮೇತ ಮುರುಗಮಲ್ಲ ದರ್ಗಾಗೆ ಹೋಗಿ ವಾಪಸ್ ಬರುವಾಗ ಬಚ್ಚವಾರಹಳ್ಳಿ ಬಳಿ ಅಪಘಾತ ಈ ಸಂಭವಿಸಿದೆ. ಇನ್ನು ಕಾರಿನಲ್ಲಿದ್ದ ಸರ್ದಾರ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ನಗೀನಾ, ಅಮ್ರಿನ್, ಸುಯೇಬ್ ಸೇರಿದಂತೆ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಆದರೆ ವಿಪರ್ಯಾಸವೆಂದರೆ ಒಂದು ಗಂಟೆಯಾದರೂ ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬಾರದೇ ಸ್ಥಳದಲ್ಲಿದ್ದ ಎಎಸ್ ಐ ಚಂದ್ರಪ್ಪ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನಾ ಸ್ಥಳಕ್ಕೆ ಅಪಾರ ಜಿಲ್ಲಾ ರಕ್ಷಣಾಧಿಕಾರಿ ರಾಜಾ ಇಮಾಮ್ ಖಾಸಿಂ, ಡಿವೈಎಸ್ಪಿ ಮುರಳೀಧರ್, ಚಿಂತಾಮಣಿ ಗ್ರಾಮಾಂತರ ಠಾಣೆ ಸಿಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.