CHIKKANAYAKANAHALLI : ಬಡವರಿಗೆ ಸೂರು ನೀಡಿ, ಅವರ ಜೀವನವನ್ನು ಸುಧಾರಿಸುವ ಕೆಲಸ ಮಾಡಲು ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಬಡವರು ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಎಷ್ಟೇ ಭಾರಿ ಅಧಿಕಾರಿಗಳ ಜೊತೆ ಮೀಟಿಂಗ್ಗಳನ್ನು ಮಾಡಿ ಮೇಲಾಧಿಕಾರಿಗಳು ಸೂಚನೆಯನ್ನು ನೀಡುತ್ತಾರೆ. ಅದ್ಯಾಕೋ ಕೆಲವು ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಅನ್ನೋ ಆರೋಪ ಕೇಳಿ ಬರ್ತಾನೆ ಇದೆ. ಇತ್ತ ಚಿಕ್ಕನಾಯಕನಹಳ್ಳಿಯಲ್ಲಿ ರಾಜೀವ್ ಗಾಂಧಿ ಯೋಜನೆಯ ಮನೆಗಳ ಕಾಮಗಾರಿ ಪೂರ್ಣಗೊಳ್ಳದೆ, ಅಲ್ಲಿ ಹಾಕಿರುವ ಕಬ್ಬಿಣಗಳು ತುಕ್ಕು ಹಿಡಿಯುತ್ತಿದ್ದು, ಬಡವರು ಮನೆಗಳಿಲ್ಲದೆ ಪರದಾಡುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿಯ ದಿಬ್ಬದಹಳ್ಳಿ, ಭುವನಹಳ್ಳಿ, ಕೋಡಿಹಳ್ಳಿಯಲ್ಲಿ ಬಡವರಿಗಾಗಿ ಪುರಸಭೆಯಿಂದ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಇದಕ್ಕಾಗಿ 2006ರಲ್ಲಿ ಮೇಲ್ಕಂಡ ಗ್ರಾಮಗಳಲ್ಲಿ ಸ್ಥಳವನ್ನು ಕೂಡ ನಿಗದಿಪಡಿಸಿತ್ತು. ಗುದ್ದಲಿ ಪೂಜೆಯನ್ನು ಕೂಡ ಮಾಡಲಾಗಿತ್ತು. ತದನಂತರ ಅಲ್ಲಿ ಮನೆಗಳನ್ನು ಕಟ್ಟಲು ಪ್ರಾರಂಭಿಸಿತ್ತು. ಇತ್ತ ಮನೆಗಳನ್ನು ಕಟ್ಟೋಕೆ ಶುರು ಮಾಡಿ 3 ವರ್ಷ ಕಳೆದಿದೆ. ಆದರೆ, ಇದುವರೆವಿಗೂ ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ಅತ್ತ ಹಾಕಿರುವ ಕಬ್ಬಿಣಗಳು ಮಳೆ-ಗಾಳಿಗೆ ತುಕ್ಕು ಹಿಡಿಯುತ್ತಿವೆ. ಬೇಸ್ಮೆಂಟ್ ಗಳು ಕೂಡ ಕಿತ್ತುಬರುತ್ತಿವೆ ಎಂದು ಮಾಜಿ ಪುರಸಭೆ ಅಧ್ಯಕ್ಷರು ಆಕ್ರೋಶ ಹೊರಹಾಕಿದರು.
ಈ ಜಾಗದಲ್ಲಿ 210 ಸೈಟ್ಗಳಿವೆ ಹಾಗೂ 420 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೂರು ವರ್ಷವಾದರೂ ಕಾಮಗಾರಿ ಪೂರ್ಣವಾಗಿಲ್ಲ. ಪುರಸಭೆಯ ಅಂಡರ್ನಲ್ಲಿ ಜಿ+1 ಮನೆಗಳನ್ನು ಕಟ್ಟಲಾಗುತ್ತಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನು ಕಂಟ್ರ್ಯಾಕ್ಟರ್ ನಿಶಾ ಪಾಟೀಲ್ ಅವರನ್ನು ಕಾಮಗಾರಿ ಬಗ್ಗೆ ಕೇಳಿದರೆ ನಮಗೆ ಹಣ ಬಿಡುಗಡೆ ಆಗಿಲ್ಲ ಅಂತಿದ್ದಾರೆ. ಈಗಾದರೇ ಬಡವರಿಗೆ ಸೂರು ಸಿಗೋದು ಯಾವಾಗ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅದೇನೇ ಇರಲಿ ಬಡವರಿಗೆ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣಗೊಳಿಸಬೇಕಿದೆ. ಜೊತೆಯಲ್ಲಿ ನಮಗೆ ಒಂದು ಸೂರು ಆಗುತ್ತೆ ಅಂತ ಕಾಯುತ್ತಿರುವ ಬಡವರ ಗೋಳನ್ನು ಅಧಿಕಾರಿಗಳು ಕೇಳಬೇಕಿದೆ. ಇತ್ತ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಕಾಮಗಾರಿ ಸ್ಥಳದಲ್ಲಿ ಹಾಕಿರುವ ಕಬ್ಬಿಣಗಳು ತುಕ್ಕು ಹಿಡಿಯುತ್ತಿವೆ. ಇದರಿಂದ ಹಣ ವ್ಯರ್ಥವಾಗುತ್ತಿದೆ. ಅತ್ತ ಮಳೆಗೆ ಮನೆಗಳ ಗೋಡೆಗಳು, ಬೇಸ್ಮೆಂಟ್ ಕೂಡ ಗೆದ್ದಲು ಹಿಡಿಯುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಿ ಬಡವರಿಗೆ ಸೂರು ಒದಗಿಸುವ ಕೆಲಸ ಮಾಡಬೇಕಿದೆ.