ಚಿಕ್ಕನಾಯಕನಹಳ್ಳಿ : ಈಗಲೂ ಅದೆಷ್ಟೋ ಕುಟುಂಬಗಳು ಮೂಲಭೂತ ಸೌಕರ್ಯ ವಿಲ್ಲದೇ ಪರದಾಡುವಂತಾಗಿದೆ. ಸೌಕರ್ಯ ಇರಲಿ, ಇರಲು ಒಂದು ಮನೆ ಕೂಡ ಇಲ್ಲದೇ ಅದೆಷ್ಟೋ ಜನರು ಬೀದಿಗೆ ಬಿದ್ದಂತಾಗಿದೆ, ಇತ್ತ ಸರ್ಕಾರದ ನಿರ್ಲಕ್ಷ್ಯಕ್ಕೆ ಕುಟುಂಬಗಳು ಬಲಿಯಾಗಿವೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದರನಗರದಲ್ಲಿರುವ ಕುಟುಂಬಗಳಿಗೆ ಸರ್ಕಾರ ಹಕ್ಕುಪತ್ರ ವಿತರಣೆ ಮಾಡಿತ್ತು. ಆದರೆ ಹಕ್ಕು ಪತ್ರ ಕೊಟ್ಟ ಸರ್ಕಾರ ಮತ್ತೆ ಕಿತ್ತುಕೊಂಡಿದ್ದು, ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ದಬ್ಬೆಗಟ್ಟ ಬಳಿಯ ಸಿದ್ದರ ನಗರದ ಅದೆಷ್ಟೋ ಕುಟುಂಬಗಳು ಭಾರತೀಯರಾಗಿದ್ದರೂ, ಬದುಕಿಗೆ ಸರಿಯಾದ ಒಂದು ಸೂರಿಲ್ಲ. ಇಲ್ಲಿನ ಜನತೆಗೆ ಒಂದು ಕಡೆ ಹಕ್ಕು ಪತ್ರ ಇಲ್ಲ, ಮತ್ತೊಂದ್ಕಡೆ ಮೂಲಭೂತ ಸೌಕರ್ಯಗಳು ಇಲ್ಲದೇ ಜನರು ಪರದಾಡುವಂತಾಗಿದೆ. ಮನೆ ಒಂದ್ಕಡೆ ಇಲ್ಲವಾದರೆ, ಮತ್ತೊಂದು ಕಡೆ ಇಲ್ಲಿನ ಜನರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದೇ ಮಹಿಳೆಯರು ಹಾಗೂ ಮಕ್ಕಳು ಅಲೆದಾಡುತ್ತಿದ್ದಾರೆ. ಇನ್ನು ಇಲ್ಲಿರುವ ನಿವಾಸಿಗಳು ಬೀದಿ ದೀಪವನ್ನೇ ಕಂಡಿಲ್ವಂತೆ, ಕತ್ತಲಲ್ಲಿ ರಾತ್ರಿ ವೇಳೆ ಓಡಾಡಲು ಹೆದರುವಂತಾಗಿದ್ದು, ಕಾಡು ಪ್ರಾಣಿಗಳ ಭೀತಿಯನ್ನು ಎದರಿಸುತ್ತಿದ್ದಾರೆ. ಸಾಲದಕ್ಕೆ ಇಲ್ಲಿನ ಮಕ್ಕಳು ನಿತ್ಯ 2 ಕಿಲೋ ಮೀಟರ್ ನಡೆದುಕೊಂಡೇ ಓಡಾಡಬೇಕಿದೆ.
ಸಿದ್ದರ ನಗರದ ಸರ್ವೇ ನಂಬರ್ 120ರ ಜಾಗದಲ್ಲಿ ಜನರಿಗೆ ಹಕ್ಕು ಪತ್ರಗಳನ್ನು ನೀಡಿದ್ದಾರೆ, ಆದರೆ ಹಕ್ಕು ಪತ್ರಗಳು ಸರಿ ಇಲ್ಲ ಅಂತಾ ಅಧಿಕಾರಿಗಳು ಹಕ್ಕು ಪತ್ರಗಳನ್ನು ವಾಪಸ್ ಪಡೆದುಕೊಂಡಿದ್ದಾರಂತೆ. ಈ ಬಗ್ಗೆ ತಹಶೀಲ್ದಾರ್ ಕಚೇರಿಗೆ ಹೋಗಿ ಕೇಳಿದರೆ ಅಧಿಕಾರಿಗಳು ಇಲ್ಲಿನ ನಿವಾಸಿಗಳ ಮೇಲೆ ದರ್ಪ ತೋರಿತ್ತಿದ್ದಾರೆ ಎಂದು ಇಲ್ಲಿನ ಜನರು ಆರೋಪ ಮಾಡ್ತಿದ್ದಾರೆ.
ಒಂದು ಕೈಯಲ್ಲಿ ಹಕ್ಕು ಪತ್ರಗಳನ್ನು ಕೊಟ್ಟು, ಮತ್ತೊಂದು ಕೈಯಲ್ಲಿ ಅದನ್ನು ಕಿತ್ತುಕೊಂಡಿದ್ದು ಮಾತ್ರ ದುರಂತವೇ ಸರಿ., ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಇಲ್ಲಿನ ನಿವಾಸಿಗಳಿಗೆ ಬೇಕಾದ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಿ ಅವರ ಬದುಕಿಗೆ ದಾರಿ ಮಾಡಿಕೊಡಬೇಕಿದೆ.