CHIKKAMAGALURU : ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳ ಸರಣಿ ಮುಂದುವರಿದಿದ್ದು, ಮತ್ತೋರ್ವ ಯುವ ಕಾಫಿ ಬೆಳೆಗಾರ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮಾಣಿಮಕ್ಕಿ ಗ್ರಾಮದ ನಿವಾಸಿ 35 ವರ್ಷದ ಅರುಣ್ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅರುಣ್ ಕಾಫಿ ಬೀಜಗಳನ್ನು ಬೆಳೆದಿದ್ದು, ಅದಕ್ಕೆ ಹವಾಮಾನ ವೈಪರೀತ್ಯದಿಂದ ಬೆಂಬಲ ಬೆಲೆ ಸಿಗದೇ, ಬೆಳೆ ಕೊಯ್ಲು ಆಗದೇ, ಕೃಷಿಗಾಗಿ ಹಲವು ಕೈಸಾಲಗಳೊಂದಿಗೆ ರಾಷ್ಟ್ರೀಯ ಬ್ಯಾಂಕ್ಗಳಿಂದಲೂ ಸಾವಿರಾರು ರೂಪಾಯಿ ಸಾಲ ತೆಗೆದುಕೊಂಡಿದ್ದರು ಎನ್ನಲಾಗ್ತಿದೆ. ಬೆಳೆ ಕೊಯ್ಲಿಗೆ ಹವಾಮಾನ ಅಡ್ಡಿ ಮತ್ತು ಬೆಲೆ ಇಳಿಕೆಯಾಗಿ ಬಡ್ಡಿ ಕಟ್ಟಲಾಗದೇ ಮಾನಸಿಕ ಚಿಂತೆಗೆ ಒಳಗಾಗಿದ್ದು, ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಪ್ರತಿ ವರ್ಷ ಕಾಫಿ ಬೆಳೆಗಾರರು ಹವಾಮಾನ ವೈಪರೀತ್ಯದಿಂದ ಕಾಫಿ ಬೆಲೆಯಲ್ಲಿ ಇಳಿಕೆಯಾಗಿ ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.