CHIKKABALLAPURA : ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರ ಪ್ರದೇಶದ ಗಡಿಯನ್ನು ಹೊಂದಿಕೊಂಡಿದ್ದು, ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಟಿಪ್ಪರ್ ಲಾರಿಗಳ ಹಾವಳಿ ಹೆಚ್ಚಾಗಿದೆ. ಟಿಪ್ಪರ್ ಲಾರಿಗೆ ಸಿಲುಕಿ ಕ್ರಷರ್ನ ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದ ಬಳಿ ನಡೆದಿದೆ. ವೆಂಕಟೇಶ್ ಮೃತ ಕ್ರಷರ್ ಕಾರ್ಮಿಕನಾಗಿದ್ದಾನೆ.
ಶ್ರೀ ವೆಂಕಟೇಶ್ವರ ಸ್ಟೋನ್ ಕ್ರಷರ್ನಲ್ಲಿ ರೈಟರ್ ಆಗಿ ಕೆಲಸ ಮಾಡ್ತಿದ್ದ 33 ವರ್ಷದ ವೆಂಕಟೇಶ್, ಕೆಲಸಗಾರರಿಗೆ ಇಂದು ಬೆಳಗ್ಗೆ ಟಿಫನ್ ತರಲು ಹೋದ ವೇಳೆ ಯಮ ಸ್ವರೂಪಿಯಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಟಿಪ್ಪರ್ ಲಾರಿ ಅಡಿಗೆ ಸಿಲುಕಿದ ವೆಂಕಟೇಶ್ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಮಾಡಿದ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ, ಮೃತ ವೆಂಕಟೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಯಿಂದ ಅಪಘಾತವಾಗಿದ್ದು, ಮೃತ ಕುಟುಂಬಕ್ಕೆ ಪರಿಹಾರ ಕೊಡದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇನ್ನು, ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಟಿಪ್ಪರ್ ಲಾರಿಗಳ ಸ್ಪೀಡ್ ಗೆ ಬ್ರೇಕ್ ಹಾಕುವಲ್ಲಿ ವಿಫಲರಾಗಿದ್ದಾರೆ, ರಾಜಕೀಯ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿರುವ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದರು. ಮೃತ ವೆಂಕಟೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಶವಾಗಾರದ ಮುಂದೆ ಕುಟುಂಬಸ್ಥರ ಗೋಳಾಟ ಹೇಳತೀರದಾಗಿತ್ತು.
ಸದ್ಯ ಈ ಸಂಬಂಧ ಪೇರಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಲಾರಿ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಷರ್ ನಲ್ಲಿ ರಾತ್ರಿ ಹಗಲು ದುಡಿದು ಮನೆಯನ್ನು ಪೋಷಣೆ ಮಾಡ್ತಾ ಇದ್ದ ಮನೆ ಯಜಮಾನನ್ನು ಕಳೆದುಕೊಂಡು ಕುಟಂಬ ಈಗ ಅನಾಥವಾಗಿದೆ, ಇನ್ನಾದರೂ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಟಿಪ್ಪರ್ ಗಳ ಆವಳಿಗೆ ಬ್ರೇಕ್ ಹಾಕುತ್ತಾ ಎಂದು ಕಾದು ನೋಡಬೇಕಿದೆ.